ಬೆಂಗಳೂರು: 2014ರ ಚುನಾವಣೆಯಲ್ಲಿ ದೇಶದಲ್ಲೇ ಭಾರೀ ಹೈವೋಲ್ಟೇಜ್ ಕದನ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆದಿತ್ತು. ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಜೊತೆ ನಡೆದ ಸ್ಪರ್ಧೆಯಲ್ಲಿ ಅಂತಿಮವಾಗಿ ಅನಂತ್ ಕುಮಾರ್ ಜಯಗಳಿಸಿದರು.
1996ರಿಂದ 2009ರವರೆಗೆ ಸತತ 5 ಬಾರಿ ಆಯ್ಕೆಯಾಗಿದ್ದ ಅನಂತ್ ಕುಮಾರ್ ಅವರನ್ನು ಈ ಬಾರಿ ಹೇಗಾದರೂ ಮಾಡಿ ಸೋಲಿಸಲೇ ಬೇಕು ಎನ್ನುವ ಹಠಕ್ಕೆ ಕಾಂಗ್ರೆಸ್ ಬಿದ್ದಿತ್ತು. 2009ರಲ್ಲಿ ಕೃಷ್ಣ ಭೈರೇಗೌಡ 37,612 ಮತಗಳ ಅಂತರದಿಂದ ಸೋತಿದ್ದರು. 2013ರಲ್ಲಿ ಕೃಷ್ಣ ಭೈರೇಗೌಡ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದ ಹಿನ್ನೆಲೆಯಲ್ಲಿ 2014ರಲ್ಲಿ ಹೊಸ ಮುಖವನ್ನು ಪರಿಚಯ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಆಗ ಕಾಂಗ್ರೆಸ್ ನಾಯಕರಿಗೆ ಕಂಡಿದ್ದೆ ನಂದನ್ ನಿಲೇಕಣಿ.
ಆಧಾರ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ಅವರನ್ನು ಕಣಕ್ಕೆ ಇಳಿಸಿದರೆ ಅನಂತ್ ಕುಮಾರ್ ಅವರಿಗೆ ಸ್ಪರ್ಧೆ ನೀಡಬಹುದು ಎನ್ನುವ ಆಲೋಚನೆಯನ್ನು ಕಾಂಗ್ರೆಸ್ ಹಾಕಿತ್ತು. ಯಾವಾಗ ನಿಲೇಕಣಿಯಿಂದ ಸಕ್ರೀಯ ರಾಜಕಾರಣಕ್ಕೆ ಬರಲು ಒಪ್ಪಿಗೆ ಸಿಕ್ಕಿತ್ತೋ ಕಾಂಗ್ರೆಸ್ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ಅನಂತ್ ಕುಮಾರ್ ವಿರುದ್ಧವಾಗಿ ನಿಲೇಕಣಿ ನಿಲ್ಲುತ್ತಾರೆ ಎನ್ನುವ ವಿಚಾರ ಅಧಿಕೃತವಾಗುತ್ತಿದ್ದಂತೆ ರಾಷ್ಟ್ರೀಯ ಮಾಧ್ಯಮಗಳು ಸಹ ಬೆಂಗಳೂರು ದಕ್ಷಿಣ ಕ್ಷೇತ್ರದತ್ತ ಗಮನಹರಿಸತೊಡಗಿತು. ಅನಂತ್ ಕುಮಾರ್ ರಾಜಕೀಯ ಕ್ಷೇತ್ರದ ಅನುಭವ, ಕೇಂದ್ರದ ಮಾಜಿ ಮಂತ್ರಿಯಾಗಿದ್ದರೆ ನಿಲೇಕಣಿ ಇನ್ಫೋಸಿಸ್, ಆಧಾರ್ ವಿಚಾರದಿಂದಾಗಿ ಮೊದಲೇ ಜನಪ್ರಿಯರಾಗಿದ್ದರು. ನಾಮಪತ್ರ ಸಲ್ಲಿಕೆಯ ವೇಳೆ ತನ್ನ ಬಳಿ 7,700 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಘೋಷಿಸಿಕೊಂಡಿದ್ದರಿಂದ ಸ್ಪರ್ಧೆಯ ಜೊತೆಗೆ ಇಬ್ಬರ ಸುದ್ದಿಯೂ ಹೆಚ್ಚಾಯಿತು.
ಅನಂತ್ ಕುಮಾರ್ ಅವರನ್ನು ಈ ಬಾರಿ ಸೋಲಿಸಿ, ನಿಲೇಕಣಿ ಗೆಲ್ಲಲೇಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಸೂಚಿಸಿದ್ದರಂತೆ. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲೇ ಇರುವುದರ ಜೊತೆಗೆ ಸಾಕ್ಷರತಾ ಮತದಾರರ ಸಂಖ್ಯೆಯೂ ಹೆಚ್ಚು ಇರುವ ಕಾರಣದಿಂದಲೂ ಈ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ನಡೆಯಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮವಾಗಿ ಅನಂತ್ ಕುಮಾರ್ 2.28 ಲಕ್ಷ ಮತಗಳ ಅಂತರದಿಂದ ವಿಜಯಿಯಾದರು. ಅನಂತ್ ಕುಮಾರ್ 6,33,816 ಮತಗಳನ್ನು ಪಡೆದಿದ್ದರೆ, ನಿಲೇಕಣಿ 4,05,241 ಮತಗಳನ್ನು ಪಡೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews