ಬೆಂಗಳೂರು: ಪ್ರೀತಿಸಿದ ಯುವತಿಗಾಗಿ ಮೂವರು ಯುವಕರು ಆಕೆಯ ಪೋಷಕರನ್ನು ಕೊಲ್ಲಲು ಯತ್ನಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನೆಲಮಂಗಲ ಸಮೀಪದ ಕಾಚನಹಳ್ಳಿಯಲ್ಲಿ ನಡೆದಿದೆ.
ಗಂಗನರಸಮ್ಮ ಮತ್ತು ಮಂಜುನಾಥ್ ಗಾಯಗೊಂಡ ಯುವತಿಯ ಪೋಷಕರು. ಇವರ ಕೊಲೆಗೆ ಕಾಚನಹಳ್ಳಿ ಗ್ರಾಮದ ನಿವಾಸಿಗಳಾದ ನಾಗೇಶ, ನರಸಿಂಹಮೂರ್ತಿ ಮತ್ತು ನಾಗೇಂದ್ರ ಈ ಮೂವರು ಯುವಕರು ಯತ್ನಿಸಿದ್ದಾರೆ.
ಮೂವರು ಯುವಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೆ ಯುವತಿಯನ್ನು ಓಲೈಸಿಕೊಳ್ಳಲು ಅಡ್ಡಿಯಾದ ಆಕೆಯ ಪೋಷಕರ ಕೊಲೆಗೆ ಸಂಚು ರೂಪಿಸಿದ್ದರು. ಯುವತಿ ಹಾಗೂ ಆಕೆಯ ಪೋಷಕರಾದ ಗಂಗನರಸಮ್ಮ ಮತ್ತು ಮಂಜುನಾಥ್ ಮೇಲೆ ಇಟ್ಟಿಗೆ, ದೊಣ್ಣೆಯಿಂದ ಹಲ್ಲೆ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮೂವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಯ ಬಳಿಕ ಪುಂಡ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹುಡುಗಿಗಾಗಿ ಕೊಲೆ ಮಾಡಲು ಮುಂದಾದ ಯುವಕರಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕೆಂದು ನೊಂದ ಪೋಷಕರು ಒತ್ತಾಯಿಸಿದ್ದಾರೆ.
ಯುವಕರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.