Bengaluru City
ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟರ್ – ಪಾಕ್ ಪ್ರೇಮಿ ಅಮೂಲ್ಯ ಕೈವಾಡದ ಶಂಕೆ

ಬೆಂಗಳೂರು: ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟರ್ ಬಳಕೆಯ ಹಿಂದೆ ಪಾಕ್ ಪ್ರೇಮಿ ಅಮೂಲ್ಯ ಕೈವಾಡದ ಇದೆಯೇ ಎಂಬ ಶಂಕೆ ಎದ್ದಿದೆ.
ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸಿಎಎ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಕಾಯ್ದೆಯನ್ನು ವಿರೋಧಿಸುವ ವೇಳೆ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟರ್ ಬಳಸಿದ್ದರು.
ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಪ್ರಕರಣದ ಹಿಂದೆ ಪಾಕ್ ಪರ ಘೋಷಣೆ ಕೂಗಿ ಪೊಲೀಸರು ಅತಿಥಿಯಾಗಿರುವ ಅಮೂಲ್ಯ ಕೈವಾಡ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಪಶ್ಚಿಮ ವಲಯ ಡಿಸಿಪಿ ರಮೇಶ್ ಬಾನೂತ್ ಜಂಟಿಯಾಗಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅಮೂಲ್ಯಳನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.
ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿರುವ ಹಲಸೂರು ಗೇಟ್ ಪೊಲೀಸರ ತನಿಖೆಯಲ್ಲೂ ಅಮೂಲ್ಯ ಕೈವಾಡ ಶಂಕೆ ವ್ಯಕ್ತವಾಗಿತ್ತು. ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಅಮೂಲ್ಯಳನ್ನು ಎಲ್ಲ ರೀತಿಯಲ್ಲೂ ತನಿಖೆ ಮಾಡಲಾಗುತ್ತಿದೆ.
ಪ್ರಕರಣ ಸಂಬಂಧ ಸೂಕ್ತ ಮಾಹಿತಿಗಳನ್ನು ಕಲೆ ಹಾಕಿ ತೀವ್ರ ವಿಚಾರಣೆ ನಡೆಸಲಾಗಿದೆ. ನಾಳೆಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು ಅಮೂಲ್ಯಳನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ.
