ಬೆಂಗಳೂರು: ಬಡಕಲಾವಿದರ ಖಾತೆಗೆ ಸರ್ಕಾರದ ವತಿಯಿಂದ ಎರಡು ಸಾವಿರ ಹಣವನ್ನು ಅವರ ಖಾತೆಗೆ ಹಾಕುತ್ತಿದ್ದೇವೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಸಿ.ಟಿ.ರವಿ, ಬಡ ಕಲಾವಿದರ ನೆರವಿಗೆ ಸರ್ಕಾರ ಬರುತ್ತದೆ ಎಂದು ನಾನು ಕಳೆದ ವಾರ ಹಿಂದೆ ಮಾತು ನೀಡಿದ್ದೆ. ಈಗ ಸಿಎಂ ಬಳಿ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿದ್ದೇನೆ. ನಮ್ಮ ಜಯಂತಿಯಲ್ಲಿ ಉಳಿದ ಹಣವನ್ನು ಕ್ರೋಢೀಕರಿಸಿ ಬಡ ಕಲಾವಿದರ ಬ್ಯಾಂಕ್ ಖಾತೆಗೆ 2 ಸಾವಿರ ಹಣ ಹಾಕಲು ಇವತ್ತಿನಿಂದ ಪ್ರಾರಂಭ ಮಾಡಿದ್ದೇವೆ ಎಂದರು.
ನಾನು ಸ್ವಯಂ ಪ್ರೇರಿತನಾಗಿ ಹೋಂ ಕ್ವಾರಂಟೈನ್ನಲ್ಲಿದ್ದೇನೆ. ಕಲಾವಿದರ ಖಾತೆಗೆ ಹಣ ಹಾಕುತ್ತಿರುವುದು ಸಂತೋಷದ ಸುದ್ದಿ. ಒಳ್ಳೆ ಕೆಲಸವನ್ನ ಮನೆಯಿಂದಲೂ ಮಾಡಬಹುದು ಎಂದಿದ್ದಾರೆ. ಯಾರದ್ದು ಸರಿಯಾದ ಅಕೌಂಟ್ ನಂಬರ್ ಹಾಗೂ ಆಧಾರ್ ಸಂಖ್ಯೆ ಬಂದಿದೆಯೋ ಅವರ ಖಾತೆಗೆ ಇಂದಿನಿಂದ ಹಣ ಸಂದಾಯವಾಗಲಿದೆ. ಉಳಿದಿದ್ದೆಲ್ಲವನ್ನು ಪರಿಶೀಲನೆ ಮಾಡಿ ಹಣ ಹಾಕುತ್ತೇವೆ ಎಂದು ಸಿಟಿ ರವಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಪ್ರತಿಯೊಬ್ಬ ಬಡ ಕಲಾವಿದರು ಹಾಗೂ ಯಾರೂ ತಮ್ಮ ಜೀವನವನ್ನು ಕಲೆಯ ಮೇಲೆಯೇ ಅವಲಂಬಿಸಿರುತ್ತಾರೋ ಅಂತಹ ಬಡ ಕಲಾವಿದರ ನೆರವಿಗೆ ನಮ್ಮ ಸರ್ಕಾರ ಸದಾ ಸಿದ್ಧ. ಈ ಒಳ್ಳೆಯ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಹೋಂ ಕ್ವಾರಂಟೈನ್ನಲ್ಲಿರುವ ಸಚಿವ ಸಿ.ಟಿ ರವಿ ವಿಡಿಯೋ ಮಾಡಿ ಕಳಿಸಿದ್ದಾರೆ.
ಸಚಿವ ಸಿ.ಟಿ.ರವಿ ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ಬಡ ಕಲಾವಿದರಿಗೆ ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದರು.