ಬೆಂಗಳೂರು: ಕಾಣೆಯಾಗಿದ್ದ ಪ್ರೇಮಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಕೇರಳ ಮೂಲದ ಶ್ರೀಲಕ್ಷ್ಮಿ ಹಾಗೂ ಜನಾರ್ದನ್ ಮೃತ ಪ್ರೇಮಿಗಳು. ಇಬ್ಬರ ಮೃತ ದೇಹಗಳು ಆನೇಕಲ್ನ ಚಿಂತಲ ಮಡಿವಾಳ ಗ್ರಾಮದ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಎಲೆಕ್ಟ್ರಾನಿಕ್ ಸಿಟಿಯ ಕಂಪನಿಯೊಂದರಲ್ಲಿ ಶ್ರೀಲಕ್ಷ್ಮಿ ಮತ್ತು ಜನಾರ್ದನ್ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಸ್ನೇಹ ಬೆಳೆದು, ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಇಬ್ಬರು ಕಾಣೆಯಾಗಿದ್ದರು.
ಈ ಸಂಬಂಧ ಶ್ರೀಲಕ್ಷ್ಮಿ ಹಾಗೂ ಜನಾರ್ದನ್ ಪೋಷಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದ್ದರು. ಆದರೆ ಇಂದು ಚಿಂತಲ ಮಡಿವಾಳ ಗ್ರಾಮದ ಕೆಲವರು ಕೆರೆ ಬಳಿಗೆ ಹೋದಾಗ ಶವ ಕೊಳೆತ ವಾಸನೆ ಬಂದಿದೆ. ಬಳಿಕ ಸ್ಥಳಕ್ಕೆ ಹೋಗಿ ನೋಡಿದಾಗ ಮೃತದೇಹ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರೇಮಿಗಳ ಮೃತದೇಹವು ತುಂಡು ತುಂಡಾಗಿ ಬಿದ್ದಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ.