ಬೆಳಗಾವಿ: ರಾಜ್ಯ ಮೈತ್ರಿ ಸರ್ಕಾರದ ಪರಿಸ್ಥಿತಿ ಗಂಡ ಬಿಟ್ಟ ಹೆಂಡತಿ ಮತ್ತು ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್ನಂತಿದೆ ಎಂದು ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಅಥಣಿ ಪಟ್ಟಣದಲ್ಲಿರುವ ತಮ್ಮ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸದ್ಯ ಹೊಸದಾಗಿ ಮದುವೆಯಾದ ಗಂಡ ಹೆಂಡತಿಯಂತಿದೆ. ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ತಂತಿ ಇಲ್ಲ ಹೊಂದಾಣಿಕೆ ಇಲ್ಲ ಎಂದು ಲೇವಡಿ ಮಾಡಿದರು.
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಸಹ ಯಾವುದೇ ಹೊಸ ಯೋಜನೆ ಇಲ್ಲ. ರಾಜ್ಯ ಸರ್ಕಾರದವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಅಂತ ಹೇಳುತ್ತಾರೆ. ಆದರೆ ಆ ಯೋಜನೆ ಕೇಂದ್ರ ಸರ್ಕಾರದ್ದು. ಹಾಗಾದರೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿವ ಮೂಲಕ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೂ 20 ವರ್ಷಗಳ ಹಳೆಯ ರಾಜಕೀಯ ದ್ವೇಷವಿದೆ. 2004 ರಲ್ಲಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು ಆದರೆ ದೇವೇಗೌಡರು ಅದಕ್ಕೆ ಅಡ್ಡಗಾಲು ಹಾಕಿ ಆ ಅವಕಾಶ ಕಸಿದುಕೊಂಡಿದ್ದರು. ತಮ್ಮಿಂದ ಸಿಎಂ ಸ್ಥಾನ ಕಸಿದಿದ್ದಕ್ಕೆ ಸಿದ್ದು ಅವರ ಜೊತೆ ಮೈತ್ರಿ ಮಾಡಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಆ ಒಂದು ಆಕ್ರೋಶದಿಂದಲೇ ಸಿದ್ದರಾಮಯ್ಯ ಗೌಡರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ರಾಜಕೀಯ ಒಳ ಸುಳಿವು ನೋಡಿದಾಗ ಇದೆಲ್ಲ ಗೊತ್ತಾಗುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು.