ಕೇವಲ 25 ನಿಮಿಷಗಳಲ್ಲಿ ಕಲಾಪ ಮುಕ್ತಾಯ

Public TV
1 Min Read
Session last day

– ಎರಡು ದಿನಗಳ ಕಾಲ ಪ್ರತಿಭಟನೆ ಮೊಳಗಿಸಿದ ವಿಪಕ್ಷ
– ಗದ್ದಲದಲ್ಲಿಯೇ ಎರಡು ವಿಧೇಯಕಗಳಿಗೆ ಅಂಗೀಕಾರ ಪಡೆದ ಸರ್ಕಾರ
– ಅಧಿವೇಶನಕ್ಕೆ ಮಾಜಿ ಸಿಎಂ ಚಕ್ಕರ್

ಬೆಳಗಾವಿ: ಚಳಿಗಾಲ ಅಧಿವೇಶನದ ಕೊನೆಯ ದಿನದ ಕಲಾಪ ಗದ್ದಲ ಗೊಂದಲಗಳಿಗಷ್ಟೇ ಸೀಮಿತವಾಗಿ 11 ಗಂಟೆಗೆ ಆರಂಭವಾದ ಸದನ ಕೇವಲ 25 ನಿಮಿಷದಲ್ಲಿ ಮುಕ್ತಾಯವಾಯಿತು.

ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ನಿನ್ನೆಯಂತೆ ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷದ ಶಾಸಕರು ಪರ ವಿರೋಧ ಘೋಷಣೆಗೆ ಇಳಿದರು. ಇದರಿಂದಾಗಿ ಕಲಾಪದಲ್ಲಿ ಗೊಂದಲ ಆರಂಭವಾಗಿತ್ತು. ಈ ಪರಿಸ್ಥಿತಿಯಲ್ಲಿ ಸರ್ಕಾರವು ಎರಡು ವಿಧೇಯಕಗಳಿಗೆ ಅಂಗೀಕಾರ ಪಡೆಯಿತು.

Session last day 1

ಕರ್ನಾಟಕ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರ ನೇಮಕಾತಿ ತಿದ್ದುಪಡಿ ಹಾಗೂ ರೈ ತಾಂತ್ರಿಕ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು. ಗದ್ದಲ ಜಾಸ್ತಿಯಾಗುತ್ತಿದ್ದಂತೆ ಸ್ಪೀಕರ್ ಅನಿರ್ಧಿಷ್ಟ ಅವಧಿಗೆ ಸದನವನ್ನು ಮುಂದೂಡಿದರು. ಬಳಿಕ ಪ್ರತಿಭಟನೆಯ ಬಿಸಿ ಕಲಾಪಕ್ಕೆ ತಟ್ಟಿದ್ದರಿಂದ ಅಧಿವೇಶನದ ಕೊನೆಯ ದಿನ ಯಾವುದೇ ಚರ್ಚೆ ನಡೆಯದೇ ರಾಷ್ಟ್ರಗೀತೆಯೊಂದಿಗೆ ಅಧಿವೇಶನಕ್ಕೆ ತೆರೆ ಬಿದ್ದಿತು.

ರೈತರ ಕೃಷಿ ಸಾಲಮನ್ನಾ ಹಾಗೂ ಸಿಎಂ ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಆದರೆ ಕುಮಾರಸ್ವಾಮಿ ಅವರು ಇದಕ್ಕೆ ತಲೆ ಕೆಡಿಸಿಕೊಳ್ಳದೆ ಕಲಾಪದಿಂದ ದೂರ ಉಳಿದಿದ್ದರು. ಬಿಜೆಪಿ ಶಾಸಕರ ಪ್ರತಿಭಟನೆ ಹಾಗೂ ಆಡಳಿತ ಪಕ್ಷದ ಕೆಲ ನಾಯಕರ ಗೈರು ಎಲ್ಲವೂ ಸದನವನ್ನು ನುಂಗಿ ಹಾಕಿತು.

siddaramaiah

ಕಾಡಿದ ಮಾಜಿ ಸಿಎಂ ಗೈರು:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದೇಶಿ ಪ್ರವಾಸ, ಕ್ಷೇತ್ರ ಪ್ರವಾಸದಲ್ಲಿ ಫುಲ್ ಬ್ಯೂಸಿ ಆಗಿದ್ದರು. ಹೀಗಾಗಿ ಶಾಸಕಾಂಗ ಸಭೆಯ ದಿನದಂದು ಮಾತ್ರ ಕಲಾಪದಲ್ಲಿ ಕಾಣಿಸಿಕೊಂಡರು. ಸಂಪುಟ ವಿಸ್ತರಣೆಯ ಕುರಿತು ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಇದರಿಂದಾಗಿ ಕೊನೆಯ ದಿನದ ಕಲಾಪದಿಂದ ಅವರು ದೂರ ಉಳಿದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *