ಬೆಂಗಳೂರು: ಇರುವ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಇರುವಾಗಲೇ ಬಿಡಿಎ (BDA) ಈಗ ಎರಡು ಪ್ರಮುಖ ಬಡಾವಣೆ ವಿಸ್ತರಣೆಗೆ ಮುಂದಾಗಿದೆ.
ಹೌದು. ಕೆಂಪೇಗೌಡ ಬಡಾವಣೆ (Kempegowda Layout) ಮತ್ತು ಶಿವರಾಮ ಕಾರಂತ ಬಡಾವಣೆ (Shivaram Karanth Layout) ವಿಸ್ತರಣೆಗೆ ಮುಂದಾಗಿರುವ ಬಿಡಿಎ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿದೆ.
ಈಗಾಗಲೇ ಶಿವರಾಮಕಾರಂತ ಬಡಾವಣೆಯಲ್ಲಿ 34,000 ಸಾಮಾನ್ಯ ಸೈಟ್ಗಳು ಮತ್ತು 4,500 ಕಾರ್ನರ್ ಸೈಟ್ಗಳೊಂದಿಗೆ 3,546 ಎಕರೆ ಜಮೀನಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಇದು ದೊಡ್ಡಬಳ್ಳಾಪುರ (Doddaballapura) ಮತ್ತು ಹೆಸರಘಟ್ಟ (Hesaraghatta) ನಡುವಿನ 17 ಹಳ್ಳಿಗಳನ್ನು ವ್ಯಾಪಿಸಿದೆ. ಈ ವರ್ಷದ ಆರಂಭದಲ್ಲಿ ಬಿಡಿಎ ಹೆಚ್ಚುವರಿಯಾಗಿ 2,095 ಎಕರೆಗಳಷ್ಟು ಬಡಾವಣೆಯನ್ನು ವಿಸ್ತರಿಸಲು ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?
ಇದೇ ಮಾದರಿಯಲ್ಲಿ ಕೆಂಪೇಗೌಡ ಬಡಾವಣೆಯನ್ನ ವಿಸ್ತರಣೆ ಮಾಡುತ್ತಿದೆ. ಬಿಡಿಎ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಿದೆ ಎಂದು ತಿಳಿದು ಭೂ ಮಾಲೀಕರು ಅಕ್ರಮವಾಗಿ ಕಟ್ಟಡವನ್ನ ಕಟ್ಟಲು ಮುಂದಾಗುತ್ತಿದ್ದಾರೆ. ಇದನ್ನು ತಡೆಯಲು ಬಿಡಿಎ ವಿದ್ಯುತ್ ಕಡಿತಕ್ಕೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದೆ.
ಒಟ್ಟಾರೆ ಎರಡು ಬಡಾವಣೆಗಳಲ್ಲೂ ಸಾವಿರಾರು ಎಕರೆಯಲ್ಲಿ ಸೈಟ್ ನಿರ್ಮಾಣಕ್ಕೆ ಮುಂದಾಗಿದೆ. ವಿಸ್ತರಣಾ ಕಾರ್ಯ ಶುರುವಾಗಿದ್ದು ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.