ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಪರಿಸರ ಉಳಿಸಲು ಸರ್ಕಾರದಿಂದ ಇಕಾಲಾಜಿಕಲ್ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಉಳಿಸಲು 100 ಕೋಟಿ ಮೊತ್ತದ ಇಕಾಲಾಜಿಕಲ್ ಬಜೆಟ್ ಮಂಡನೆ ಮಾಡುತ್ತೇವೆ. ಇದರ ಜೊತೆಗೆ ಎಲ್ಲೆಲ್ಲಿ ಅರಣ್ಯ ನಾಶ ಆಗಿದೆಯೋ, ಬಂಜರು ಭೂಮಿ ಇದೆಯೋ ಅದನ್ನು ಪುನಶ್ಚೇತನ ಮಾಡುತ್ತೇವೆ. ರಾಜ್ಯದಲ್ಲಿ ಅರಣ್ಯವು 24% ಇದೆ. ಇದನ್ನು ಮುಂದಿನ 5 ವರ್ಷಗಳಲ್ಲಿ 30%ಕ್ಕೆ ಏರಿಸುವ ಯೋಜನೆ ಹಾಕಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಪಂಚಭೂತಗಳಲ್ಲಿ ಶ್ರೇಷ್ಠವಾದುದ್ದು ಮಣ್ಣು. ಮಣ್ಣಿನಲ್ಲಿ ಎಲ್ಲ ಪಂಚಭೂತಗಳೂ ಅಡಕವಾಗಿವೆ. ಆದರೆ ನಾವು ಯಾವ್ಯಾವುದೋ ಸಮಾವೇಶ ಮಾಡುತ್ತೇವೆ. ಅದರ ಜೊತೆಗೆ ನಮ್ಮ ಅಸ್ತಿತ್ವ, ಭವಿಷ್ಯಕ್ಕೆ ಕಾರಣವಾಗಿರುವ ಮಣ್ಣು ಉಳಿಸಿ ಸಮಾವೇಶ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ 2008ರಲ್ಲಿ ಯಡಿಯೂರಪ್ಪ ಭೂಚೇತನ ಕಾರ್ಯಕ್ರಮ ತಂದರು. ಭೂಚೇತನ ಮಣ್ಣಿನಲ್ಲಿರುವ ಸತ್ವ, ಸಾರ ಉಳಿಸುವ ಯೋಜನೆ ಇದಾಗಿದೆ. ಮಣ್ಣಿನಲ್ಲಿ ನೈಸರ್ಗಿಕ ಸತ್ವ, ಸಾರ ಕಮ್ಮಿ ಇದ್ದರೆ ಅದನ್ನು ಸರಿದೂಗಿಸುವ ಕಾರ್ಯಕ್ರಮವಾಗಿದೆ. ಮಣ್ಣು ಉಳಿಸಿ ಪರಿಕಲ್ಪನೆಯನ್ನು ದೂರದೃಷ್ಟಿಯಿಂದ ಅಂದೇ ಮಾಜಿ ಸಿಎಂ ಯಡಿಯೂರಪ್ಪ ಪರಿಚಯಿಸಿದರು ಎಂದರು. ಇದನ್ನೂ ಓದಿ: ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್
ಇದೇ ವೇಳೆ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ಸರ್ಕಾರ ಕೈಜೋಡಿಸುವ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿ ಹಾಕಿದರು. ಈ ಬಗ್ಗೆ ಮಾತನಾಡಿದ ಅವರು, ಮಣ್ಣು ಉಳಿಸಿ ಅಭಿಯಾನ ಐತಿಹಾಸಿಕ ಮಹತ್ವದ್ದಾಗಿದ್ದು, ಜಗತ್ತಿನ ಇತಿಹಾಸದ ಪುಟಗಳಲ್ಲಿ ಈ ಅಭಿಯಾನ ದಾಖಲೆ ಆಗಲಿದೆ. ಈ ಅಭಿಯಾನ ಯಶಸ್ವಿ ಆಗಿದೆ, ಮುಂದೆಯೂ ಯಶಸ್ವಿಯಾಗಲಿದೆ. ಹುಟ್ಟುವ ಮಗುವಿಗೂ ಈ ಅಭಿಯಾನ ಅವಶ್ಯಕತೆ ಇದೆ. ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ಸರ್ಕಾರ ಸಹಕಾರ ನೀಡಲಿದೆ ಎಂದರು. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?