ಬೆಂಗಳೂರು: ಇಂದು ಮಧ್ಯಾಹ್ನ 1.30 ರೊಳಗೆ ವಿಶ್ವಾಸ ಮತ ಸಾಬೀತು ಮಾಡಿ ಎಂದು ರಾಜ್ಯಪಾಲರು ಬರೆದ ಪತ್ರವೇ ಈಗ ದೋಸ್ತಿ ಸರ್ಕಾರಕ್ಕೆ ವರದಾನವಾಗಿದೆ.
ಹೌದು. ವಿಶ್ವಾಸ ಮತಯಾಚನೆಯನ್ನು ಆದಷ್ಟು ಬೇಗ ಮಾಡಿಸಿ ಎಂದು ರಾಜ್ಯಪಾಲರು ಸಿಎಂಗೆ ಬರೆದ ಪತ್ರವೇ ಈಗ ದೋಸ್ತಿ ಸರ್ಕಾರಕ್ಕೆ ನೆರವಾಗಲಿದೆ. ಈ ಪತ್ರವನ್ನು ಇಟ್ಟುಕೊಂಡು ಸದನವನ್ನು ಮುಂದೂಡುವ ಬಗ್ಗೆ ಮೈತ್ರಿ ಸರ್ಕಾರ ತಂತ್ರ ಮಾಡಿದೆ.
ರಾಜ್ಯಪಾಲರು ನೀಡಿರುವ ಪತ್ರದ ಆಧಾರದ ಮೇಲೆನೇ ಇಂದು ಮೈತ್ರಿ ಸರ್ಕಾರ ಸುಪ್ರೀಂ ಕೋರ್ಟಿಗೆ ಮೂರು ಅರ್ಜಿಯನ್ನು ಸಲ್ಲಿಕೆ ಮಾಡಿದೆ. ಈ ಅರ್ಜಿಯನ್ನು ಸಿಎಂ ಪರವಾಗಿ ರಾಜೀವ್ ಧವನ್ ಸಲ್ಲಿಸಿದ್ದು, ಅರ್ಜಿಯಲ್ಲಿ ವಿಪ್ ವಿಚಾರದಲ್ಲಿನ ಗೊಂದಲ ನಿವಾರಣೆ ಮಾಡುವಂತೆ ಉಲ್ಲೇಖಿಸಲಾಗಿದೆ. ಆದರೆ ಇಂದು ಸರ್ಕಾರ ಹಾಕಿದ ಅರ್ಜಿ ಕೋರ್ಟಿನಲ್ಲಿ ವಿಚಾರಣೆಗೆ ಬರುವುದು ಬಹುತೇಕ ಡೌಟ್. ಯಾಕೆಂದರೆ ಇಂದು ಶುಕ್ರವಾರವಾದ್ದರಿಂದ ಸುಪ್ರೀಂ ಕೋರ್ಟಿನಲ್ಲಿ ಕೆಲ ಮಹತ್ತರ ಅರ್ಜಿ ವಿಚಾರಣೆ ಮತ್ತು ಆದೇಶಗಳು ಮಾತ್ರ ಆಗುತ್ತವೆ.
ಹಾಗಾಗಿ ಮೈತ್ರಿ ಸರ್ಕಾರ ಅರ್ಜಿ ಹಾಕಿದ ತಕ್ಷಣ ರಾಜ್ಯಪಾಲರ ಆದೇಶಕ್ಕೆ ಮಂಗಳವಾರದ ತನಕ ತಡೆಯಾಜ್ಞೆ ತರುವ ಸಾಧ್ಯತೆ ಇದೆ. ಈ ಮೂಲಕ ತಡೆಯಾಜ್ಞೆ ತಂದು ಅಲ್ಲಿವರೆಗೂ ಸದನ ಮುಂದೂಡುವ ತಂತ್ರವನ್ನು ದೋಸ್ತಿಗಳು ಮಾಡಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.