ಬಾಗಲಕೋಟೆ: ಬಿಸಿಯೂಟ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಅನ್ನ-ಸಾಂಬರ್ ಬಿಸಿಯೂಟ ಸೇವಿಸಿದ್ರು. ಬಳಿಕ ಬಿಸಿಯೂಟ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಶಾಲಾ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನ ರನ್ನಬೆಳಗಲಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.
ನಂತರ ಇನ್ನುಳಿದ ಮಕ್ಕಳಿಗೂ ಹೊಟ್ಟೆನೋವು ಕಾಣಿಕೊಂಡ ಪರಿಣಾಮ, ಬಿಸಿಯೂಟ ಸೇವಿಸಿದ 56 ಶಾಲಾ ಮಕ್ಕಳನ್ನೂ 108 ವಾಹನದ ಮೂಲಕ ಮುಧೋಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ವೈದ್ಯರು ತಪಾಸಣೆ ಮಾಡಿದ್ದು ಯಾವುದೇ ಅಪಾಯ ಇಲ್ಲ ಎಂದು ಡಿಎಚ್ಓ ಅನಂತ್ ದೇಸಾಯಿ ಸ್ಪಷ್ಟಪಡಿಸಿದ್ದಾರೆ. ಆದರೆ ಬಿಯೂಟಕ್ಕೆ ಮಾಡಲಾಗಿದ್ದ ಸಾಂಬರ್ ಗೆ ಬಳಸಿದ ತರಾಕಾರಿಗಳು ಕೊಳೆತಿದ್ದು, ಸಾಂಬರ್ ನಲ್ಲಿ ಹಲ್ಲಿ ಬಿದ್ದು ಈ ಆವಾಂತರಕ್ಕೆ ಕಾರಣವಾಗಿದೆ ಎಂದು ಮಕ್ಕಳ ಪೋಷಕರು ಶಾಲಾ ಸಿಬ್ಬಂದಿಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಇಂತಹ ಬೇಜವಾಬ್ದಾರಿ ಸಿಬ್ಬಂದಿಯ ಮೇಲೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಇತ್ತ ವೈದ್ಯರು ಆಹಾರದಲ್ಲಿ ಕಣ್ತಪ್ಪಿನಿಂದ ಏನೋ ಕಲಬೆರಿಕೆ ಯಾಗಿರೋದು ಮಕ್ಕಳು ಅಸ್ವಸ್ಥಗೊಳ್ಳಲು ಕಾರಣ ಎಂದು ಹೇಳಿದ್ದಾರೆ. ಸ್ಥಳಕ್ಕೆ ಡಿಡಿಪಿಐ ಹಾಗೂ ಮುಧೋಳ ತಹಶೀಲ್ದಾರ್ ಹಾಗೂ ಸಿಪಿಐ ಎಚ್ ಆರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.