ಹಾಸನ: ನಮ್ಮ ಆರ್ಎಸ್ಎಸ್ನ (RSS) ಒಂದು ಕೂದಲನ್ನು ಸಹ ಮುಟ್ಟಲು ಸಾಧ್ಯವಿಲ್ಲ, ಅದು ನಮ್ಮ ತಾಯಿಯ ಸ್ಥಾನದಲ್ಲಿರುವ ಸಂಘಟನೆ ಎಂದು ಸಂಸದ ಬಿ.ವೈ.ರಾಘವೇಂದ್ರ (B.Y. Raghavendra) ಹೇಳಿದ್ದಾರೆ.
ಹಾಸನ (Hassan) ಜಿಲ್ಲೆಯ ಬೇಲೂರಿನಲ್ಲಿ (Belur) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಶಾಂತಿಯನ್ನು ಮೂಡಿಸುವಂತಹ ಇಂತಹ ಸಂಸ್ಥೆಗಳು ಜೀವಂತವಾಗಿ ಇದ್ದಾವೆ ಅಂದರೆ ಅದಕ್ಕೆ ಕಾರಣನೇ ಸಿದ್ದರಾಮಯ್ಯ ಹಾಗೂ ಇತರೆ ಪಕ್ಷದ ನಾಯಕರುಗಳು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ಮೊದಲು ಪಿಎಫ್ಐ (PFI) ಮುಖಂಡರ ಮೇಲಿನ ಕೇಸ್ಗಳನ್ನು ಕ್ಲಿಯರ್ ಮಾಡಲು ಪ್ರಯತ್ನಿಸಿದರು. ಅಂತಹ ಸಂಘಟನೆಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಅವರ ಕೃಪಾಕಟಾಕ್ಷದಿಂದ ಪೋಷಣೆಯಾದ ಸಂಸ್ಥೆಗಳಾಗಿದೆ ಎಂದು ಹರಿಹಾಯ್ದಿದ್ದಾರೆ.
ಮುಸ್ಲಿಂ ಸಮಾಜದ ರಾಷ್ಟ್ರ ಭಕ್ತರೇನಿದ್ದಾರೆ ಅವರು ಈ ಸಂದರ್ಭದಲ್ಲಿ ಚಿಂತನೆ ಮಾಡಬೇಕು. ಪಿಎಫ್ಐ ಸಂಘಟನೆ ಮುಖಾಂತರ ಬೇರೆ, ಬೇರೆ ದೇಶದಿಂದ ಕಪ್ಪು ಹಣ ಯಾವ ರೀತಿ ಇವರ ಕೈ ಸೇರಿದೆ. ಸಿಕ್ಕಿರುವ ದಾಖಲೆಯಲ್ಲಿ ಯಾವ್ಯಾವ ಹಿಂದೂ ಸಂಘಟನೆಯ ಪ್ರಮುಖರನ್ನು ಜೀವ ಸಮೇತ ತೆಗೆಯಬೇಕೆಂದು ಷಡ್ಯಂತ್ರ ಮಾಡಿದ್ದರು. ಎಲ್ಲಿಲ್ಲಿ ಸ್ಫೋಟ ಮಾಡಬೇಕೆಂದು ಆಗಿತ್ತು. ಈಗಾಗಲೇ ಅನೇಕ ನಮ್ಮ ಹಿಂದೂ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಈ ರೀತಿಯ ನರಬಲಿ, ಅಶಾಂತಿ ಮೂಡಿಸುವ ಕೆಲಸ, ಶಾಂತಿ ಸಂದೇಶ ಸಾರುವ ಭಾರತ ದೇಶದಲ್ಲಿ ಆ ರೀತಿಯ ಘಟನೆ ಆಗಬಾರದು ಎಂದು ಹೇಳಿದ್ದಾರೆ.
ಒಬ್ಬ ಸರ್ದಾರ್ ವಲ್ಲಭಭಾಯ್ ಪಟೇಲ್ರಿಗೆ ಸರಿ ಸಮಾನರಾದ ನಮ್ಮ ಗೃಹ ಸಚಿವರಾದ ಅಮಿತ್ ಶಾ (Amit shah) ಅವರ ಆದೇಶ ಪ್ರಕಾರ ಇಡೀ ಪಿಎಫ್ಐ ಸಂಘಟನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಎಲ್ಲಾ ಪೂರಕವಾದ ದಾಖಲೆಗಳು ಸಿಕ್ಕಿವೆ, ಆ ದಾಖಲೆ ಮೂಲಕ ಐದಾರು ಸಂಸ್ಥೆಗಳನ್ನು ನಿಷೇಧ ಮಾಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ ಎಂದಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್
ದೇಶದಲ್ಲಿರುವ ಮೂವತ್ತು ರಾಜ್ಯಗಳ ಪೈಕಿ ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಉಳಿದುಕೊಂಡಿರಬಹುದು. ಅವರು ಮಾಡಿದ ತಪ್ಪು, ಓಟಿನ ತುಷ್ಠಿಕರಣಕ್ಕೋಸ್ಕರ ಇತರರನ್ನು ತುಳಿದುಕೊಂಡು ಬಂದ ಪರಿಣಾಮ, ಅವರಿಗೆ ಇಂದು ಶಾಪ ಸಿಕ್ಕಿದೆ. ಇನ್ನಾದರೂ ಈ ರೀತಿಯ ಹೇಳಿಕೆಗಳನ್ನು ಕೊಡಬಾರದು. ಈ ರೀತಿಯ ತೀರ್ಮಾನಗಳಿಗೆ ಒಳ್ಳೆಯದಾಗಲಿ ಅಂತ ಹೇಳದಿದ್ದರೂ ನ್ಯೂಟ್ರಲ್ ಆಗಿರುವುದು ಒಳ್ಳೆಯದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಂತಿದ್ದ ಮುಸ್ಲಿಂ ಯುವಕರ ಮೇಲೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ – ಲವ್ ಜಿಹಾದ್ ಆರೋಪ
ಆರ್ಎಸ್ಎಸ್ನ್ನು ನಿಷೇಧ ಮಾಡುವ ತಾಕತ್ತು ಯಾರಿಗೂ ಇಲ್ಲ, ಹಿಂದೆ ಇದ್ದ ನಾಯಕರುಗಳು ಕೂಡ ಪ್ರಯತ್ನಿಸಿದರು. ಆರ್ಎಸ್ಎಸ್ಗೂ ಇದಕ್ಕೂ ಹೋಲಿಕೆನೇ ಮಾಡಲು ಸಾಧ್ಯವಿಲ್ಲ. ದೇಶದ ರಕ್ಷಣೆಗೆ ಹಿಂದುತ್ವದ ಮೂಲಕ ಆರ್ಎಸ್ಎಸ್ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ, ಯಡಿಯೂರಪ್ಪ, ನಾವು ಕೂಡ ಎಲ್ಲರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರೇ, ನಮಗೆ ಯಾವುದೇ ಮುಜುಗರವಿಲ್ಲ. ನಮ್ಮ ತಾಯಿಯ ಸ್ಥಾನದಲ್ಲಿರುವ ಸಂಘಟನೆ. ಅದರ ನೆರಳಿನಲ್ಲಿ ನಾವು ಸ್ವಯಂಸೇವಕರಾಗಿ ಕೆಲಸವನ್ನು ಮಾಡುತ್ತಿದ್ದೇವೆ, ಬಾಯಿಗೆ ಬಂದ ಹಾಗೆ ಈ ರೀತಿಯ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಅವರ ಪಕ್ಷದಲ್ಲಿ ಅವರು ನಿಷೇಧ ಮಾಡಿಕೊಳ್ಳಲಿ. ಯಾರು ಭಾರತವನ್ನು ಒಡೆದಿದ್ದಾರೆ ಅವರು ಅರ್ಥವಿಲ್ಲದ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.