ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಳೆ ನವರಾತ್ರಿಯ 9ನೇ ದಿನದ ಸಂಭ್ರಮ ಮನೆ ಮಾಡಲಿದೆ. ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿ, ಖಾಸಾ ಆಯುಧಗಳಿಗೆ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ.
ಮೈಸೂರು (Mysuru Dasara 2022) ಅರಮನೆ ಅಂಗಳದಲ್ಲಿ ನಾಳೆ ಆಯುಧ ಪೂಜೆ (Ayudha Pooja) ಯ ಕೈಂಕರ್ಯಗಳು ನಡೆಯಲಿವೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸತತ 7ನೇ ಬಾರಿ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಮುಂಜಾನೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಪಟ್ಟದ ಕತ್ತಿ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಗಮಿಸಲಿದ್ದು, ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ಅರಮನೆಗೆ ಕೊಂಡೊಯ್ಯಲಾಗುತ್ತದೆ. ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ.
ಪ್ರತಿ ವರ್ಷದಂತೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಚಂಡಿಕಾ ಹೋಮ ನಡೆಯಲಿದ್ದು, ಮುಂಜಾನೆಯಿಂದಲೇ ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭಗೊಳ್ಳಲಿವೆ. ಯದುವೀರ್ ಅವರು ಖಾಸಾ ಆಯುಧಗಳಿಗೆ ಪೂಜೆ ಮುಗಿಸಿ ಕಲ್ಯಾಣ ಮಂಟಪದಿಂದ ಸವಾರಿ ತೊಟ್ಟಿಗೆ ಆಗಮಿಸಲಿದ್ದಾರೆ. ಈ ವೇಳೆ ಕಾಯೋ ಶ್ರೀ ಗೌರಿ ಎನ್ನುವ ಮೈಸೂರು ಸಂಸ್ಥಾನ ಗೀತೆಯನ್ನು ಪೊಲೀಸ್ ಬ್ಯಾಂಡ್ನವರು ನುಡಿಸಲಿದ್ದು, ಯದುವೀರ್ ಅವರು ಈ ವೇಳೆ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಪಟ್ಟದ ಆನೆ ಧನಂಜಯ, ನಿಶಾನೆ ಆನೆ ಅಶ್ವಥಾಮ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆ, ರಾಜವಂಶಸ್ಥರು ಬಳಸುವ ವಾಹನಗಳು ಸಾಲಾಗಿ ನಿಲ್ಲಿಸಲಿದ್ದು, ಯದುವೀರ್ ಅವರು ಸಾಂಕೇತಿಕವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಪೂಜಾ ವಿಧಿವಿಧಾನ ಮುಗಿಸಿಲಿದ್ದಾರೆ. ಈ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ (Trishika Kumari Singh) ಹಾಗೂ ತಾಯಿ ಪ್ರಮೋದಾ ದೇವಿ ಒಡೆಯರ್ (Pramoda Devi wadeyar) ಸಹ ಆಯುಧಾ ಪೂಜಾ ವಿಧಿ ವಿಧಾನಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಸಂಜೆ ಪ್ರಸಕ್ತ ಸಾಲಿನ ಖಾಸಗಿ ದರ್ಬಾರ್ ಕೂಡ ಮುಕ್ತಾಯವಾಗಲಿದ್ದು, ಸಿಂಹಾಸನ ಮತ್ತು ಕಂಕಣ ವಿಸರ್ಜನೆ ನಡೆಯಲಿದೆ.
ಒಟ್ಟಿನಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ನಾಳೆ ಆಯುಧಪೂಜೆಯ ಸಂಭ್ರಮ ಮನೆ ಮಾಡಿದ್ದು, ಅಂಬಾವಿಲಾಸ ಅರಮನೆಯಲ್ಲಿ ಗತಕಲಾದ ವೈಭವ ಮರುಕಳಿಸಲಿದೆ.