– ರಾಮಮಂದಿರ ವಿಚಾರದಲ್ಲಿ ಬಿಜೆಪಿ ಗಿಮಿಕ್ ಮಾಡ್ತಿದೆ ಎಂದು ಟೀಕೆ
ಕೋಲ್ಕತ್ತಾ: ರಾಮಮಂದಿರ (Ram Mandir ceremony) ಉದ್ಘಾಟನೆ ವಿಚಾರವಾಗಿ ಬಿಜೆಪಿ ನಡೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕಿಡಿಕಾರಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಗಿಮಿಕ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಜಾಯ್ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಮಮಂದಿರದ ಬಗ್ಗೆ ನನಗೆ ಪ್ರಶ್ನೆ ಕೇಳಲಾಗಿತ್ತು. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ, ಎಲ್ಲರ ಬಗ್ಗೆ ಮಾತನಾಡುವ ಹಬ್ಬದಲ್ಲಿ ನನಗೆ ನಂಬಿಕೆ ಇದೆ ಎಂದು ಬಿಜೆಪಿ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏಕನಾಥ್ ಶಿಂಧೆ ಬಣ ನಿಜವಾದ ಶಿವಸೇನೆ – ಮಹಾರಾಷ್ಟ್ರ ಸ್ಪೀಕರ್
ಇತರ ಸಮುದಾಯಗಳ ಜನರನ್ನು ಕಡೆಗಣಿಸುತ್ತಿದ್ದೀರಿ. ಏನು ಬೇಕಾದರೂ ಮಾಡಿಕೊಳ್ಳಿ, ಚುನಾವಣೆಗೂ ಮುನ್ನ ಗಿಮಿಕ್ ಮಾಡುತ್ತಿದ್ದೀರಿ. ಮಾಡಿ, ನನಗೇನೂ ತೊಂದರೆ ಇಲ್ಲ. ಆದರೆ ಬೇರೆ ಸಮುದಾಯದವರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.
ನಾನು ಬದುಕಿರುವವರೆಗೂ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ತಾರತಮ್ಯವನ್ನು ಎಂದಿಗೂ ಅನುಮತಿಸುವುದಿಲ್ಲ. ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವುದನ್ನು ನಾನು ನಂಬುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ದೇಶದ ಕತೆಯ ಪ್ರತಿಬಿಂಬ; ರಾಮನ ಬಗ್ಗೆ ಅಪಪ್ರಚಾರ ಸಲ್ಲದು: ಗುರೂಜಿ ರಿತೇಶ್ವರ್ ಮಹಾರಾಜ್
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 6,000 ಕ್ಕೂ ಹೆಚ್ಚು ಜನರು ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.