ದಾವಣಗೆರೆ: ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕನಿಗೆ ಸ್ಥಳೀಯರು ಥಳಿಸಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಮಂಜುನಾಥ್ ಎಂಬಾತನೇ ಸ್ಥಳೀಯರಿಂದ ಹಲ್ಲೆಗೊಳಗಾದ ಆಟೋ ಚಾಲಕ. ಮಂಜುನಾಥ್ ಯುವತಿಯನ್ನು ನಗರದ ಹೊರವಲಯದ ಬೈಪಾಸ್ ಬಳಿ ಕರೆತಂದಿದ್ದನು. ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸೋದನ್ನು ಕಂಡ ಸ್ಥಳೀಯರು ಮಂಜುನಾಥ್ ನನ್ನು ಪ್ರಶ್ನೆ ಮಾಡಿದ್ದಾರೆ.
ಸ್ಥಳೀಯರ ಪ್ರಶ್ನೆಗಳಿಗೆ ಉತ್ತರಿಸಲು ಮಂಜುನಾಥ್ ತಡವರಿಸಿದ್ದಾನೆ. ಈ ವೇಳೆ ಯುವತಿ ಆಟೋ ಚಾಲಕ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಸ್ಥಳೀಯರಿಗೆ ತಿಳಿಸಿದ್ದಾಳೆ. ಆಟೋ ಚಾಲಕ ಮಂಜುನಾಥ್ ಗೆ ಯುವತಿ ಹಾಗೂ ಸ್ಥಳೀಯರು ಸೇರಿ ಚಪ್ಪಲಿಯಿಂದ ಧರ್ಮದೇಟು ನೀಡಿದ್ದಾರೆ.
ಈ ಸಂಬಂಧ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಅಪರಾಧ ವಿಭಾಗದ ಪೊಲೀಸರು ಸ್ವಯಂ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.