ದಾವಣಗೆರೆ: ಹಲವು ದಶಕಗಳ ಹೋರಾಟ ಸಾವಿರಾರು ಜನರ ಬಲಿದಾನದ ನಂತರ ಈಗ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ರಾಮನ ಮೂರ್ತಿ ಕೆತ್ತನೆ ಮಾಡಿದ್ದು ಕನ್ನಡಿಗ, ಮೂರ್ತಿಗೆ ಕಲ್ಲು ಬಳಸಿದ್ದು ಕರ್ನಾಟಕದ್ದು. ಜೊತೆಗೆ ಮಂದಿರಕ್ಕೆ 60% ಬಳಸಿದ ಕೆಂಪು ಕಲ್ಲು ಸಹ ಕನ್ನಡದ್ದು. ಕನ್ನಡದ ನೆಲಕ್ಕೂ ಶ್ರೀರಾಮನಿಗೂ ಎಲ್ಲಿಲ್ಲದ ನಂಟು ಕಾಕತಾಳೀಯ ಎಂಬಂತೆ ಹೊಂದಾಣಿಕೆಯಾಗಿದೆ. ಇದಕ್ಕೆ ಕರ್ನಾಟಕದ ನೆಲದಲ್ಲಿಯೇ ಮೂಲ ವಿಗ್ರಹಗಳು ಇದೆ ಎಂಬ ಪ್ರತೀತಿ ಮಾತು ನಿದರ್ಶನ ಇದೆ. ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಹರಿಹರ ತುಂಗಾಭದ್ರಾ ನದಿ ತಟದಲ್ಲಿರುವ ಶ್ರೀ ರಾಮಮಂದಿರ (Ram Mandir) ಅಲ್ಲಿನ ರಾಮ ಲಕ್ಷ್ಮಣ, ಸೀತಾ ವಿಗ್ರಹಗಳು ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ.
ಹರಿಹರದ ತುಂಗಾಭದ್ರಾ (Tungabhadra) ನದಿ ತಟದಲ್ಲಿರುವ ಸದ್ಗುರು ಸಮರ್ಥ ನಾರಾಯಣ ಆಶ್ರಮದಲ್ಲಿರುವ ರಾಮ ಮಂದಿರ ಇದೀಗ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಭಾರತದ ಮೇಲೆ ಬಾಬರ್ ದಾಳಿ ಮಾಡಿದ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿನ ಮೂಲ ವಿಗ್ರಹಗಳು ಅಲ್ಲಿಂದ ಸ್ಥಳಾಂತರಗೊಂಡವು ಎಂಬುದು ಇತಿಹಾಸ. ಸ್ಥಳಾಂತರಗೊಂಡ ರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಗಳನ್ನು ದಕ್ಷಿಣ ಭಾರತಕ್ಕೆ ತರಲಾಯಿತು ಎಂಬುವುದಕ್ಕೆ ಕೆಲ ದಾಖಲೆಗಳಿವೆ. ಆ ಮೂರ್ತಿಗಳನ್ನ ಅಲ್ಲಿನ ಪುರೋಹಿತರು ಸಮರ್ಥ ನಾರಾಯಣ ಮಹಾರಾಜರ ಪೂರ್ವಿಕರಿಗೆ ಒಪ್ಪಿಸಿದ್ದರು. ಇದೇ ಕಾರಣಕ್ಕೆ ನರ್ಮದಾ ನದಿ ತೀರದಿಂದ ತುಂಗಭದ್ರಾ ತೀರಕ್ಕೆ ತಂದಿದ್ದಾರೆ ಎಂಬುದು ಪ್ರತೀತಿ. ಶತಮಾನಗಳಿಂದ ಸಮರ್ಥ ನಾರಾಯಣ ಮಹಾರಾಜರ ಆಶ್ರಮದಲ್ಲಿ ಈ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗ್ತಿದೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್ನಲ್ಲಿ ಬಂಧಿಸಿದ್ರು!
ಸಮರ್ಥ ನಾರಾಯಣ ಮಹಾರಾಜರು ಬಾಲ ಸನ್ಯಾಸಿಗಳಾಗಿ, ನಂತರ ಸಂಸಾರಿಗಳಾದ್ರು. ಆಗಿನ ಕಾಲದಲ್ಲಿ ಇಡಿ ದೇಶ ಸುತ್ತಿ ಅಯೋಧ್ಯೆಗೂ ಹತ್ತಾರು ಸರಿ ಸುತ್ತಾಡಿ ಬಂದಿದ್ದರು. 1990 ರ ಜುಲೈ 5 ರಂದು ಇವರು ದೇಹ ತ್ಯಾಗ ಮಾಡಿದ್ರು. ವಿಶೇಷ ಅಂದ್ರೆ ಬಾಬ್ರಿ ಮಸೀದಿ ರಾಮ ಮಂದಿರ ಸಂಘರ್ಷದಲ್ಲಿ ಇಲ್ಲಿನ ಸಮರ್ಥ ನಾರಾಯಣ ಮಹಾರಾಜರು ಓರ್ವ ಪ್ರತಿವಾದಿ ಆಗಿದ್ದರು. ಈ ಆಶ್ರಮದಲ್ಲಿ ಇರುವ ಮೂರ್ತಿಗಳು ಇದು ಚರಮೂರ್ತಿಗಳಾಗಿದ್ದು ಅಯೋಧ್ಯೆಯಲ್ಲಿ ಸ್ಥಿರಪೀಠದ ಮೂರ್ತಿಗಳಿವೆ ಎಂಬ ಇತಿಹಾಸವಿದೆ.