– ಅಜ್ಜನಿಗೆ ಉಳುಮೆಯಲ್ಲಿ ಸಹಾಯ ಮಾಡಲು ಹೆಗಲು ಕೊಟ್ಟಿದ್ದ ಮೊಮ್ಮಕ್ಕಳು
ಮಂಡ್ಯ: ಅಜ್ಜನಿಗೆ ಎತ್ತುಗಳನ್ನು ಕೊಳ್ಳಲು ಕಷ್ಟವಾಗಿರುವ ಕಾರಣ ಇಬ್ಬರು ಮೊಮ್ಮಕ್ಕಳು ನೊಗಕ್ಕೆ ಹೆಗಲು ಕೊಟ್ಟು ವ್ಯವಸಾಯ ಮಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದಲ್ಲಿ ಜರುಗಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಈ ಸುದ್ದಿ ನೋಡಿದ ಜ್ಯೋತಿಷಿ ಕಮಲಾಕರ ಭಟ್ ಅವರು ಬಡ ರೈತನಿಗೆ ಎತ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ.
ಎತ್ತುಗಳಿಲ್ಲದ ಕಾರಣ ಅಜ್ಜನಿಗೆ ಕಷ್ಟವಾಗಬಾರದು ಎಂದು ಮೊಮ್ಮಕ್ಕಳು ನೋಗವನ್ನು ಹೊತ್ತು ಹೊಲ ಉಳುಮೆ ಮಾಡುವ ಮೂಲಕ ಸಹಾಯವಾಗಿದ್ದರು. ಈ ಕುರಿತು ಬುಧವಾರ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ವರದಿಯನ್ನು ನೋಡಿದ ಜ್ಯೋತಿಷಿ ಕಮಲಾಕರ ಭಟ್ ಅವರು ಅಜ್ಜನಿಗೆ ಎತ್ತುಗಳನ್ನು ಕೊಡಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ- ಸರ್ಕಾರಕ್ಕೆ ಮಲೆನಾಡಿಗರ ಆಗ್ರಹ
ಬಳಘಟ್ಟ ಗ್ರಾಮದ ರೈತ ಸಣ್ಣಸ್ವಾಮಿ ಅವರು 1.5 ಎಕರೆ ಜಮೀನು ಹೊಂದಿದ್ದು, ಬೇಸಾಯ ಮಾಡಲು ಇವರ ಬಳಿ ಎತ್ತುಗಳಿಲ್ಲ. ಕೂಲಿ ಕೊಟ್ಟು ಉಳುಮೆ ಮಾಡಿಸಲು ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲ. ಹೀಗಾಗಿ ಸಣ್ಣಸ್ವಾಮಿ ಅವರಿಗೆ ಅವರ ಮೊಮ್ಮಕ್ಕಳಾದ ವರ್ಷಿತಾ, ಅಂಕಿತ ಹೆಗಲು ಕೊಟ್ಟು ಸಹಾಯ ಮಾಡುತ್ತಿದ್ದಾರೆ.
ಎತ್ತುಗಳ ರೀತಿ ನೊಗ ಹೊತ್ತು ಈ ಇಬ್ಬರು ಹೆಣ್ಣು ಮಕ್ಕಳು ಹೊಲದಲ್ಲಿ ನೆಟ್ಟಿರುವ ರಾಗಿಗೆ ಉಳಿಮೆ ಮಾಡಲು ಸಹಾಯಕರಾಗಿದ್ದಾರೆ. ಕಾಲೇಜಿಗೆ ಹೋಗುವ ಈ ಇಬ್ಬರು ಹೆಣ್ಣು ಮಕ್ಕಳು, ಬಿಡುವಿನ ವೇಳೆ ಜಮೀನಿಗೆ ಬಂದು ಅಜ್ಜನ ಜೊತೆ ಇದೇ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ನಮ್ಮ ಬಳಿ ಎತ್ತುಗಳಿಲ್ಲ ಅದಕ್ಕಾಗಿ ಈ ಪರಿಸ್ಥಿತಿ ಬಂದಿದೆ. ಕೂಲಿ ಕೊಟ್ಟು ವ್ಯವಸಾಯ ಮಾಡುವಷ್ಟು ಶಕ್ತಿ ನಮಗೆ ಇಲ್ಲ. ಯಾರಾದರೂ ಎತ್ತುಗಳನ್ನು ಕೊಡಿಸಿದರೆ ಸಹಾಯವಾಗುತ್ತದೆ ಎಂದು ಅಜ್ಜ ಹಾಗೂ ಮೊಮ್ಮಕ್ಕಳು ಕೇಳಿಕೊಂಡಿದ್ದರು.