ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ದೆಹಲಿ ಮದ್ಯ ಹಗರಣದ (Delhi Liquor Excise Scam) ಕಿಂಗ್ಪಿನ್ ಎಂದು ಜಾರಿ ನಿರ್ದೇಶನಾಲಯ (ED) ಹೇಳಿದೆ.
ಗುರುವಾರ ಬಂಧನಕ್ಕೆ ಒಳಗಾದ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಇಂದು ಪಿಎಂಎಲ್ಎ (PMLA) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದನ್ನೂ ಓದಿ: ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?
ಈ ವೇಳೆ ಇಡಿ ಪರ ವಕೀಲರು, ಕೇಜ್ರಿವಾಲ್ ಕೆಲವು ವ್ಯಕ್ತಿಗಳಿಗೆ ಕಿಕ್-ಬ್ಯಾಕ್ ಸ್ವೀಕರಿಸಲು ಸೂಚಿಸಿದರು. ಈ ಹಣವನ್ನು ಆಪ್ ಗೋವಾ ಚುನಾವಣೆಯಲ್ಲಿ ಬಳಸಲಾಗಿತ್ತು. ಮದ್ಯದ ನೀತಿಯ ರಚನೆಯಲ್ಲಿ ಅವರು ನೇರವಾಗಿ ಭಾಗಿಯಾಗಿದ್ದು ಅವರೇ ಕಿಂಗ್ ಪಿನ್ ಆಗಿದ್ದು, ಕಿಕ್ಬ್ಯಾಕ್ಗೆ ಬೇಡಿಕೆ ಇಟ್ಟಿದ್ದರು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೇಜ್ರಿವಾಲ್ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್ ದೂರು ನೀಡಿತ್ತು: ಬಿಜೆಪಿ ತಿರುಗೇಟು
ಇಡಿ ಹೇಳಿದ್ದೇನು?
ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನೂ ಬಂಧಿಸಲಾಗಿದ್ದು ಅವರಿಗೂ ಜಾಮೀನು ನೀಡಿಲ್ಲ. ಸಹ ಆರೋಪಿ ಕೆ ಕವಿತಾ ಅವರ ಹೇಳಿಕೆಯನ್ನೂ ತೆಗೆದುಕೊಳ್ಳಲಾಗಿದೆ. ಎಎಪಿ ಮಾಜಿ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ಕೆಲಸ ಮಾಡುತ್ತಿದ್ದರು.
ವಿಜಯ್ ನಾಯರ್ ಅವರು ಕೇಜ್ರಿವಾಲ್ ಅವರೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದ್ದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಜ್ರಿವಾಲ್ ಪಂಜಾಬ್ ಚುನಾವಣೆಗೆ ‘ಸೌತ್ ಗ್ರೂಪ್’ನಿಂದ ಕಿಕ್ಬ್ಯಾಕ್ ನೀಡುವಂತೆ ಒತ್ತಾಯಿಸಿದರು. ಈ ಹೇಳಿಕೆಯನ್ನು ಸಾಬೀತುಪಡಿಸಲು ನಮ್ಮ ಬಳಿ ಸಾಕ್ಷ್ಯಗಳಿವೆ. ನಗದು ವರ್ಗಾವಣೆ ಎರಡು ಬಾರಿ ನಡೆದಿದೆ. ಕೇಜ್ರಿವಾಲ್ ಅವರು ಕವಿತಾ ಅವರನ್ನು ಭೇಟಿಯಾಗಿ ದೆಹಲಿ ಅಬಕಾರಿ ನೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದ್ದರು.
ದೆಹಲಿ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿತ್ತು. ಆದರೆ ಅದು ನೆಪಮಾತ್ರದ ಸಮಿತಿಯಾಗಿತ್ತು. ಲಂಚವನ್ನು ಸ್ವೀಕರಿಸಲು ಮತ್ತು ಲಂಚ ನೀಡಿದ ವ್ಯಕ್ತಿಗಳಿಗೆ ಮರುಪಾವತಿ ಮಾಡಲು ಸಾಧ್ಯವಾಗುವಂತೆ ನೀತಿಯನ್ನು ಮಾಡಲಾಗಿದೆ.
ಈ ಪ್ರಕರಣದ ಅವಧಿ ವೇಳೆ ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ಜೊತೆಗೆ ಕೇಜ್ರಿವಾಲ್ ನೇರ ಸಂಪರ್ಕದಲ್ಲಿದ್ದರು. ಆಪ್ ಸಂವಹನ ವಿಭಾಗದ ವಿಜಯ್ ನಾಯರ್ ಕೇಜ್ರಿವಾಲ್ ಬಳಿಯ ಮನೆಯಲ್ಲಿ ತಂಗಿದ್ದರು. ದೆಹಲಿ ಸರ್ಕಾರದ ಸಚಿವರಾದ ಕೈಲಾಶ್ ಗಹ್ಲೋಟ್ ಅವರಿಗೆ ನೀಡಲಾದ ಮನೆಯಲ್ಲಿ ಅವರು ತಂಗಿದ್ದರು. ವಿಜಯ್ ನಾಯರ್ ಸೌತ್ ಗ್ರೂಪ್ ಮತ್ತು ಆಪ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದರು.
ಅರವಿಂದ್ ಕೇಜ್ರಿವಾಲ್ ಪರವಾಗಿ ಸೌತ್ ಗ್ರೂಪ್ನಿಂದ ನಾಯರ್ ಕಿಕ್ಬ್ಯಾಕ್ಗಳನ್ನು ಕೇಳಿದ್ದರು. ಇದು ಹೇಳಿಕೆಗಳಿಂದ ದೃಢೀಕರಿಸಲ್ಪಟ್ಟಿದೆ. ಕಿಕ್ ಬ್ಯಾಕ್ ನೀಡಿದ ಹಿನ್ನಲೆ ದೆಹಲಿಯಲ್ಲಿ ಸೌತ್ ಗ್ರೂಪ್ ನಿಯಂತ್ರಣ ಸಾಧಿಸಿತ್ತು. ಎಲ್ಲ ಮದ್ಯ ವ್ಯಾಪಾರಿಗಳಿಂದ ಕಿಕ್ ಬ್ಯಾಕ್ ಪಡೆಯಲಾಗಿದೆ. ಒಟ್ಟು 600 ಕೋಟಿ ರೂ.ಗೂ ಅಧಿಕ ಲಾಭ ಮಾಡಲಾಗಿದೆ.
ಹವಾಲಾ ಮೂಲಕ ಗೋವಾ ಚುನಾವಣೆ ವೇಳೆ 45 ಕೋಟಿ ರೂ ನೀಡಲಾಗಿತ್ತು. ಇದು ಹೇಳಿಕೆಯಿಂದ ಮಾತ್ರವಲ್ಲ, ಸಿಡಿಆರ್ಗಳಿಂದಲೂ ದೃಢೀಕರಣವಾಗಿದೆ. ಹಣದ ಮೂಲವನ್ನು ಪರಿಶೀಲಿಸಿದ್ದು ನಾಲ್ಕು ಮೂಲಗಳಿಂದ ಹಣ ಗೋವಾಕ್ಕೆ ಬಂದಿದೆ.