ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ದಿವಂಗತರಾಗಿ ಇಂದಿಗೆ ಒಂದು ತಿಂಗಳು ಕಳೆದರೂ ಅವರ ನೆನೆಪು ಮಾತ್ರ ಇನ್ನೂ ಮಾಸಿಲ್ಲ. ಪ್ರತಿದಿನ ಪುನೀತ್ ಹೆಸರಲ್ಲಿ ಅಭಿಮಾನಿಗಳು ಏನಾದರೂ ಒಂದು ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಇಂದು ಮಹದೇವಪುರ ಕ್ಷೇತ್ರದ ಯರಪ್ಪನಹಳ್ಳಿ ಗ್ರಾಮದಲ್ಲಿ ‘ಅಪ್ಪು ಸರ್ಕಲ್’ ಉದ್ಘಾಟನೆ ಮಾಡಲಾಯಿತು.
ಯರಪ್ಪನಹಳ್ಳಿ ಗ್ರಾಮದಲ್ಲಿ ಪುನೀತ್ ಅವರ ನೆನಪಿಗಾಗಿ ಗ್ರಾಮದ ವೃತ್ತಕ್ಕೆ ‘ಅಪ್ಪು ಸರ್ಕಲ್’ ಎಂದು ನಾಮಕರಣ ಮಾಡಿ ಇಂದು ಉದ್ಘಾಟನೆ ಮಾಡಿದ್ದಾರೆ. ಇಂದು ಊರಿನ ಎಲ್ಲ ಜನರು ಸೇರಿ ಹಬ್ಬದ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದು, ಈ ವೇಳೆ ಅಪ್ಪು ಸರ್ಕಲ್ ಎಂದು ನಾಮಫಲಕವನ್ನು ಅಳವಡಿಸಿ ಮಕ್ಕಳ ಮತ್ತು ಊರಿನ ಹಿರಿಯರ ಕೈಯಲ್ಲಿ ಉದ್ಘಾಟನೆ ಮಾಡಿಸಿದರು. ಗ್ರಾಮದ ಎಲ್ಲ ಹಿರಿಯರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇದನ್ನೂ ಓದಿ: ಕಾಂಗ್ರೆಸ್ಗೆ ತಾಕತ್ತಿದ್ದರೆ ಬಿಜೆಪಿ ಸರ್ಕಾರದ ವಿರುದ್ಧದ 40% ಆರೋಪ ಸಾಬೀತು ಪಡಿಸಲಿ: ಶ್ರೀರಾಮುಲು
ಪುನೀತ್ ಅಭಿಮಾನಿ ಮುನಿರಾಜ್ ಈ ಕುರಿತು ಮಾತನಾಡಿ, ಇಂದು ನಮ್ಮ ಗ್ರಾಮದ ಎಲ್ಲರೂ ತೀರ್ಮಾನ ಮಾಡಿ ಕನ್ನಡ ರಾಜ್ಯೋತ್ಸವ ಮಾಡುವ ಮೂಲಕ ಬಂಡೆ ಬೊಮ್ಮಸಂದ್ರದಿಂದ ಯರಪ್ಪನಹಳ್ಳಿ ಕಾಲೋನಿಗೆ ಹೋಗುವ ವೃತ್ತಕ್ಕೆ ‘ಅಪ್ಪು ಸರ್ಕಲ್’ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲಾಗಿದೆ. ಪ್ರತಿವರ್ಷ ಪುನೀತ್ ಅವರ ಪುಣ್ಯಸ್ಮರಣೆ ಆಚರಣೆ ಮಾಡಲಾಗುವುದು ಎಂದರು.
ಕಳೆದ ಒಂದು ತಿಂಗಳಿಂದ ನಮ್ಮ ಕರ್ನಾಟಕದ ಜನ ದುಃಖದಿಂದ ಇದ್ದಾರೆ. ಯಾವುದೇ ಕಾರ್ಯಕ್ರಮವನ್ನು ಸಂತೋಷದಿಂದ ಆಚರಣೆ ಮಾಡುತ್ತಿಲ್ಲ. ಇವರ ಸ್ಮರಣಾರ್ಥವಾಗಿ ಈ ಸರ್ಕಲ್ ನಿರ್ಮಾಣ ಮಾಡಿದ್ದು, ಈ ವೃತ್ತವನ್ನು ಇನ್ನೂ ಮುಂದೆ ಅಪ್ಪು ಸರ್ಕಲ್ ಎಂದೇ ಕರೆಯಲಾಗುತ್ತದೆ. ಮುಂದಿನ ವರ್ಷ ಅದ್ದೂರಿಯಾಗಿ ಪುಣ್ಯ ಸ್ಮರಣೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು
ಈ ಸಂದರ್ಭದಲ್ಲಿ ಆನಂದ್, ನರಸಿಂಹಪ್ಪ, ರಾಮಚಂದ್ರ, ಗಣೇಶ್, ವೈ.ವಿ.ಕುಮಾರ್ ಲೋಕೇಶ್, ವೆಂಕಟೇಶ್, ಕುಮಾರ್ ಯರಪ್ಪನಹಳ್ಳಿ ಮತ್ತಿತರು ಇದ್ದರು.