ಚೆನ್ನೈ: ತಮಿಳುನಾಡು (Tamil Nadu) ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ(Annamalai) ಅವರು, ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಪ್ರಾದೇಶಿಕ ರಾಜಕೀಯ ಪಕ್ಷದ ಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಬಿಜೆಪಿ ತೊರೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ಗೆ ಬಂದ ಅವರು, ತಮ್ಮ ಮುಂಬರುವ ರಾಜಕೀಯ ನಡೆ ಹಾಗೂ ಹೊಸ ಆಂದೋಲನದ ನೀಲನಕ್ಷೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಹೊಸ ರಾಜಕೀಯ ಆಂದೋಲನಕ್ಕೆ ನಾವು ಜನರು (We the People) ಎಂದು ಹೆಸರಿಡಲಾಗುವುದು ಎಂದು ಪ್ರಕಟಿಸಿದ ಅವರು, ಈ ವೇದಿಕೆಯು ಸಂಪೂರ್ಣವಾಗಿ ನಾಗರಿಕರ ಕೇಂದ್ರಿತವಾಗಿರಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಳೆದ 18 ತಿಂಗಳುಗಳಿಂದ ಹಲವು ವೈಚಾರಿಕ ಮತ್ತು ಕಾರ್ಯವೈಖರಿಯ ವಿಚಾರಗಳಲ್ಲಿ ನನಗೆ ಬಿಜೆಪಿ ನಾಯಕತ್ವದ ಜೊತೆಗೆ ಭಿನ್ನಾಭಿಪ್ರಾಯಗಳಿದ್ದವು. ನಾನು 2025ರ ಡಿಸೆಂಬರ್ನಲ್ಲೇ ಪಕ್ಷ ಬಿಡುವ ಇಚ್ಛೆಯನ್ನು ಹೈಕಮಾಂಡ್ಗೆ ತಿಳಿಸಿದ್ದೆ. ಆದರೆ ಚುನಾವಣೆ ಮುಗಿಯುವವರೆಗೆ ಜವಾಬ್ದಾರಿ ನಿಭಾಯಿಸುವಂತೆ ಅವರು ಕೋರಿದ್ದರಿಂದ ನಾನು ಮುಂದುವರಿದಿದ್ದೆ,” ಎಂದು ಬಹಿರಂಗಪಡಿಸಿದರು.
ತಮ್ಮ ಮಾತಿನಲ್ಲಿ ಕರ್ನಾಟಕದಲ್ಲಿ ತಾವು ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನಗಳನ್ನು ಅಣ್ಣಾಮಲೈ ಭಾವನಾತ್ಮಕವಾಗಿ ಸ್ಮರಿಸಿಕೊಂಡರು. “ಯಾವ ಕುರ್ಚಿಯೂ, ಅಧಿಕಾರವೂ ಯಾರಿಗೂ ಶಾಶ್ವತವಲ್ಲ” ಎಂಬ ತತ್ವವನ್ನು ತಾವು ಪೊಲೀಸ್ ಸೇವೆಯಲ್ಲಿದ್ದಾಗಿನಿಂದಲೂ ನಂಬಿಕೊಂಡು ಬಂದಿರುವುದಾಗಿ ಅವರು ಮಾರ್ಮಿಕವಾಗಿ ಹೇಳಿದರು.
ರಾಜಕೀಯದಲ್ಲಿ ಒಂದೇ ಕುಟುಂಬಕ್ಕೆ ಅಥವಾ ಒಬ್ಬನೇ ವ್ಯಕ್ತಿಗೆ ಪದೇ ಪದೇ ಅಧಿಕಾರ ಸಿಗಬಾರದು. ನಾವು ಸಮಾಜದ ಪ್ರತಿಯೊಬ್ಬರಿಗೂ, ಅರ್ಹರಿಗೂ ರಾಜಕೀಯ ಅವಕಾಶ ನೀಡಲು ಬಯಸುತ್ತೇವೆ. ನಾನು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದವನು,” ಎಂದು ವಂಶಾಡಳಿತ ರಾಜಕಾರಣದ ವಿರುದ್ಧ ಅವರು ಗುಡುಗಿದರು.
ಹೊಸದಾಗಿ ಸ್ಥಾಪನೆಯಾಗಲಿರುವ ಪಕ್ಷವು ಕೇವಲ ವಿಧಾನಸಭಾ ಚುನಾವಣೆ ಮಾತ್ರವಲ್ಲದೆ, ಮುಂಬರುವ ಎಲ್ಲಾ ಹಂತದ (ಸ್ಥಳೀಯ ಸಂಸ್ಥೆಗಳು ಸೇರಿದಂತೆ) ಚುನಾವಣೆಗಳಲ್ಲೂ ಸಕ್ರಿಯವಾಗಿ ಸ್ಪರ್ಧಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ತಮಿಳುನಾಡಿನ ಜನತೆಗೆ ಪಾರದರ್ಶಕ, ಭ್ರಷ್ಟಾಚಾರ ರಹಿತ ಮತ್ತು ಸಮರ್ಥ ಆಡಳಿತವನ್ನು ನೀಡುವುದೇ ತಮ್ಮ ಹೊಸ ರಾಜಕೀಯ ಚಳವಳಿಯ ಮುಖ್ಯ ಉದ್ದೇಶ ಎಂದು ಅವರು ಸಾರಿದರು.
ನಾನು ಮಾತನಾಡಿ ಮುಗಿಸುವಾಗ wetheleader.org ವೆಬ್ಸೈಟ್ ಲೈವ್ ಆಗಲಿದೆ. ಈ ವೆಬ್ಸೈಟಿಗೆ ಹೆಸರು ನೋಂದಾಯಿಸಿ ಎಂದು ಮನವಿ ಮಾಡಿದರು.
ಬಿಜೆಪಿಯಿಂದ ಹೊರಬಂದಿದ್ದರೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಗೌರವ ಕಡಿಮೆ ಆಗಿಲ್ಲ ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಪಕ್ಷದ ಸಿದ್ಧಾಂತ ಮತ್ತು ಪ್ರಾದೇಶಿಕ ನಡೆಗಳ ಕುರಿತು ಭಿನ್ನಾಭಿಪ್ರಾಯಗಳಿದ್ದರೂ, ಪ್ರಧಾನಿ ಮೋದಿ (Narendra Modi) ಅವರ ಮೇಲೆ ನನಗೆ ಯಾವಾಗಲೂ ಅಪಾರವಾದ ಗೌರವವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹೊಸ ಪಕ್ಷವು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗಿರದೆ, ಪ್ರಾದೇಶಿಕ ತಮಿಳು ಅಸ್ಮಿತೆ ಮತ್ತು ಭಾರತದ ರಾಷ್ಟ್ರೀಯ ದೃಷ್ಟಿಕೋನ ಎರಡನ್ನೂ ಒಳಗೊಂಡಿರಲಿದೆ. ಈ ವಿಭಿನ್ನ ಆಲೋಚನೆಯನ್ನು ಅಣ್ಣಾಮಲೈ ಅವರ ಆಪ್ತ ವಲಯವು ದ್ರಾವಿಡ 2.0′ ಎಂದು ಬಣ್ಣಿಸುತ್ತಿದೆ.
ಎಲ್ಲಾ ಸಮುದಾಯಗಳು ಹಾಗೂ ಅಲ್ಪಸಂಖ್ಯಾತ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ, ಹೊಸ ಪಕ್ಷವು ಜಾತ್ಯತೀತ ಮತ್ತು ಎಲ್ಲರನ್ನೂ ಒಳಗೊಳ್ಳುವ (Inclusive) ಸ್ಪಷ್ಟ ನೀತಿಯನ್ನು ಹೊಂದಿರಲಿದೆ ಎಂದು ವರದಿಗಳು ತಿಳಿಸಿವೆ.
