ಬೆಂಗಳೂರು: ಹಣಕ್ಕಾಗಿ ಸಾಲ ಕೊಟ್ಟ ಮಹಿಳೆಯನ್ನ ಆಕ್ಸಿಡೆಂಟ್ ಮಾಡಿ ಆಸ್ಪತ್ರೆಗೆ ಸೇರಿಸೊ ನೆಪದಲ್ಲಿ ಮನೆ ಕೀ ಪಡೆದು ಹಣಕ್ಕಾಗಿ ಮನೆಯೆಲ್ಲಾ ತಲಾಶ್ ಮಾಡಿತ್ತು ಗ್ಯಾಂಗ್. ಇತ್ತ ಆಕ್ಸಿಡೆಂಟ್ ಆದ ಮಹಿಳೆ ಸಾವನ್ನಪ್ಪಿದ ಬಳಿಕ ಇದು ಆಕ್ಸಿಡೆಂಟ್ ಅಲ್ಲ ಕೊಲೆ ಅಂತಾ ಕನ್ಫರ್ಮ್ ಆಗಿ ಐವರ ಬಂಧನ ಮಾಡಲಾಗಿತ್ತು. ವಿಧಿಯಾಟ ಅಂದ್ರೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ ವೃದ್ದೆಯ ಪೋಸ್ಟ್ ಮಾರ್ಟಂ ದಿನವೇ ಆರೋಪಿ ಪೊಲೀಸ್ ವಶದಲ್ಲಿದ್ದಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಹೌದು. ಕಷ್ಟ ಅಂತ ಹೇಳಿ ಕಾಡಿ ಬೇಡಿ ವೃದ್ಧೆಯ ಬಳಿ ಆತ ಸಾಲ ಪಡೆದಿದ್ದ. ಆದ್ರೆ ಹಣ ವಾಪಸ್ ನೀಡಿರ್ಲಿಲ್ಲ. ಹಣ ವಾಪಸ್ ಕೊಡುವಂತೆ ಪೀಡಿಸಿದಾಗ ಆತ ಮಾಡಿದ ಕೆಲಸ ನಿಜಕ್ಕೂ ಆಘಾತಾಕಾರಿ. ವೃದ್ಧೆಗೆ ಅಪಘಾತವೆಸಗಿ ಆಕೆಯ ಮನೆಯಲ್ಲೇ ಮತ್ತೆ ಹಣ ದೋಚೋ ಪ್ಲ್ಯಾನ್ ಮಾಡಿ ಜೈಲು ಸೇರಿರೋ ಕಿರಾತಕರ ಸ್ಟೋರಿ ಇದು.
ಆಕೆ ಹೇಳಿ ಕೇಳಿ ಒಂಟಿ ಮಹಿಳೆ. ಜೀವನಕ್ಕೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಒಂದಷ್ಟು ಹಣ ಕೂಡಿಸಿ ಜೀವನ ನಡೆಸ್ತಿದ್ಲು. ಆದ್ರೆ ಹಣಕ್ಕಾಗಿ ಕಿರಾತಕರು ಭರ್ಜರಿ ಪ್ಲಾನ್ ಮಾಡಿ ವೃದ್ಧೆಗೆ ಅಪಘಾತವೆಸಗಿ ಕೊಲೆ ಮಾಡಿದ್ರು. ಪೊಲೀಸರ ತನಿಖೆಯಲ್ಲಿ ಐದು ಮಂದಿ ಗ್ಯಾಂಗ್ ನ ಘನಘೋರ ಕೃತ್ಯ ಬಟಾಬಯಲಾಗಿದೆ. ಹಣಕ್ಕಾಗಿ ಮಹಿಳೆಯ ಜೀವವನ್ನೇ ತೆಗೆದು ಐವರು ಕಿರಾತಕರನ್ನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ರು ಬಂಧಿಸಿದ್ದಾರೆ. ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದು ಮಹಿಳೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ರು. ಆದರೆ ಇದು ಕೇವಲ ಅಪಘಾತವಲ್ಲ ಉದ್ದೇಶಪೂರ್ವಕ ಕೊಲೆ ಅಂತಾ ಐವರು ಆರೋಪಿಗಳಾದ ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್, ಯೋಹಾನ್ ನನ್ನ ಬಂಧನ ಮಾಡಲಾಗಿದೆ..

ಆಕ್ಸಿಡೆಂಟ್, ಕಳ್ಳತನ, ಕೊಲೆ – ತ್ರಿಕೋನ ಕಥೆ
ರಸ್ತೆಯಲ್ಲಿ ನಡೆದು ಹೋಗ್ತಿದ್ದ ವಿಜಯಲಕ್ಷ್ಮಿಗೆ ರಾಕೇಶ್ ಬೈಕ್ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಅದೇ ವೇಳೆಗೆ ಆಟೋದಲ್ಲಿ ಬಂದ ಪ್ರದೀಪ್, ಯೋಹಾನ್, ಮಂಜುನಾಥ್ ಎಲ್ಲರು ಸೇರಿ ವಿಜಯಲಕ್ಷ್ಮಿಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಂಜುನಾಥ್ ವಿಜಯಲಕ್ಷ್ಮಿ ಪರ್ಸ್ ನಲ್ಲಿದ್ದ ಮನೆ ಕೀ ತೆಗೆದುಕೊಂಡು ನೇರವಾಗಿ ಆಕೆ ಮನೆಗೆ ಬಂದು ಹಣ, ಚಿನ್ನಾಭರಣ ಹುಡುಕುತ್ತಿದ್ನಂತೆ. ಡೌಟ್ ಬಂದು ಅಕ್ಕಪಕ್ಕದ ಮನೆಯವರು ಪ್ರಶ್ನೆ ಮಾಡಿದಾಗ, ವಿಜಯಲಕ್ಷ್ಮಿಗೆ ಆಕ್ಸಿಡೆಂಟ್ ಆಗಿದೆ, ಹೀಗಾಗಿ ಆಕೆ ಆಧಾರ್ ಕಾರ್ಡ್ ಬೇಕಿತ್ತು ಎಂದು ಸುಳ್ಳು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರು ಹೆಚ್ಚು ಪ್ರಶ್ನೆ ಮಾಡಿದಾಗ ಮಂಜುನಾಥ ಎಸ್ಕೇಪ್ ಆಗಿದ್ದಾನೆ. ಅತ್ತ ವಿಜಯಲಕ್ಷ್ಮಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿದ್ದು, ಈ ವೇಳೆ ಆರೋಪಿ ರಾಕೇಶ್ ತಾನೇ ವಿಜಯನಗರ ಸಂಚಾರ ಪೊಲೀಸರಿಗೆ ದೂರು ಕೊಟ್ಟು, ಪರಿಚಯಸ್ಥ ವಿಜಯಲಕ್ಷ್ಮಿಯನ್ನ ತಾನೇ ಕಾಪಾಡಿದ್ದೇನೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಕ್ರಮ ತೆಗೆದುಕೊಳ್ಳಿ ಅಂತಾ ದೂರು ನೀಡಿದ್ದಾನೆ.
ಇತ್ತ 2 ದಿನದ ಬಳಿಕ ಘಟನೆಯಲ್ಲಿ ಪೊಲೀಸರಿಗೆ ಅನುಮಾನ ಬಂದಿದ್ದು, ವಿಜಯಲಕ್ಷ್ಮೀ ಮನೆ ಮಾಲೀಕ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಳ್ಳತನ ಯತ್ನದ ದೂರು ನೀಡಿದ್ದಾರೆ. ಈ ಕೇಸ್ ತನಿಖೆಗೆ ಇಳಿದ ಪೊಲೀಸರಿಂದ ಅಸಲಿ ಕಥೆ ಬಯಲಾಗಿದ್ದು, ತನಿಖೆ ವೇಳೆ ಉದ್ದೇಶಪೂರ್ವಕವಾಗಿ ಕೊಲೆ ಎಂಬುದು ಪತ್ತೆಯಾಗಿದೆ.

ಆರೋಪಿ ಚೇತನ್, ವಿಜಯಲಕ್ಷ್ಮಿ ಬಳಿ ಹಣ ಸಾಲ ಪಡೆದಿದ್ದು, ಆಕೆ ಬಳಿ ಇನ್ನು ಹಣ ಇದೆ ಅಂತ ಕಳ್ಳತನಕ್ಕೆ ಸ್ಕೆಚ್ ಹಾಕಿದ್ನಂತೆ. ಇದಕ್ಕಾಗಿ ಪರಿಚಯಸ್ಥ ಮಂಜುನಾಥ್, ಇತರರನ್ನ ಸೇರಿಸಿಕೊಂಡು ಪ್ಲಾನ್ ಮಾಡಿದ್ದಾರೆ. ಪ್ಲಾನ್ ನಂತೆ ಡಿಕ್ಕಿ ಹೊಡೆದು ವಿಜಯಲಕ್ಷ್ಮಿಯನ್ನ ಕೊಲೆ ಮಾಡಿರೋದು ಪೊಲೀಸರ ತನಿಖೆಯಲ್ಲಿ ಪಾಪಿಗಳ ಕೃತ್ಯ ಬಯಲಾಗಿದೆ. ಮಹಿಳೆ ಮೃತಳಾದ ಎರಡೇ ದಿನಕ್ಕೆ ಆರೋಪಿ ಮಂಜುನಾಥ್ ಕೂಡ ಅನಾರೋಗ್ಯದಿಂದ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಸಾವನ್ನಪ್ಪಿದ್ದಾನೆ.
ಸದ್ಯ ಕೊಲೆ ಕೇಸ್ ದಾಖಲಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ರು ತನಿಖೆ ಮುಂದುವರಿಸಿದ್ದು, ವೃದ್ಧೆ ಪೋಸ್ಟ್ ಮಾರ್ಟಂ ದಿನವೇ ಆರೋಪಿಯೊಬ್ಬ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಅದಕ್ಕೇ ಹೇಳೋದು ಕರ್ಮ ರಿಟರ್ನ್ಸ್ ಅಂತಾ.. ಒಳ್ಳೇದು ಮಾಡಿದ್ರೆ ಒಳ್ಳೆದು ಬರುತ್ತೆ.. ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ ಸಿಗುತ್ತೆ.

