ನವದೆಹಲಿ: ಬುಧವಾರ ಎಐಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮಲ್ಲಿಕಾರ್ಜುನ ಖರ್ಗೆಯನ್ನು (Mallikarjun Kharge) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ದೆಹಲಿಯಲ್ಲಿ ಭೇಟಿಯಾದರು.
ನಾಳೆಯಿಂದ ಶತಮಾನದ ಪಕ್ಷ ಕಾಂಗ್ರೆಸ್ನಲ್ಲಿ (Congress) ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ಅಕ್ಟೋಬರ್ 17ರಂದು ನಡೆದ ಎಐಸಿಸಿ (AICC) ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡಾ 90ರಷ್ಟು ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi), 80 ವರ್ಷದ ಖರ್ಗೆಯವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. ಈ ವೇಳೆ ಖರ್ಗೆ ನಿವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಾಶಯ ಕೋರಿದರು.
ಎಐಸಿಸಿಯ ನೂತನ ಅಧ್ಯಕ್ಷರಾಗಿ ನಾಳೆ ಅಧಿಕಾರ ಸ್ವೀಕರಿಸಲಿರುವ @kharge ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಶುಭ ಹಾರೈಸಿದೆ. pic.twitter.com/KnEal7CVRi
— Siddaramaiah (@siddaramaiah) October 25, 2022
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ, 49 ದಿನಗಳ ಬಳಿಕ ಒಂದು ದಿನದ ಮಟ್ಟಿಗೆ ರಾಹುಲ್ ಗಾಂಧಿ (Rahul Gandhi) ದೆಹಲಿಗೆ ತೆರಳುತ್ತಿದ್ದಾರೆ. ಪರಾಜಿತ ಅಭ್ಯರ್ಥಿ ಶಶಿ ತರೂರ್ (Shashi Tharoor), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೇರಿ ಕಾಂಗ್ರೆಸ್ನ ಪ್ರಮುಖರು ಖರ್ಗೆ ಪದಗ್ರಹಣಕ್ಕೆ ಸಾಕ್ಷಿಯಾಗುತ್ತಿದ್ದಾರೆ. 24 ವರ್ಷಗಳ ಬಳಿಕ ಗಾಂಧಿಯೇತರರು ಪಕ್ಷದ ಚುಕ್ಕಾಣಿ ಹಿಡಿಯುತ್ತಿರುವುದು ಇದೇ ಮೊದಲು. ಈ ಹುದ್ದೆಗೇರಿದ ಕರ್ನಾಟಕ ಎರಡನೇ ರಾಜಕಾರಣಿಯಾಗಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ
ಈ ಪದವಿಗೇರಿದ ಎರಡನೇ ದಲಿತ ನಾಯಕ ಎಂಬ ಗರಿಮೆಗೆ ಖರ್ಗೆ ಪಾತ್ರರಾಗುತ್ತಿದ್ದಾರೆ. ಎಐಸಿಸಿಯ ಅತ್ಯುನ್ನತ ಮಂಡಳಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ 1997ರಲ್ಲಿ ಚುನಾವಣೆ ನಡೆದಿತ್ತು. ಇದೀಗ ಖರ್ಗೆ ಏನಾದ್ರೂ ಸಿಡಬ್ಲುಸಿಗೆ ಚುನಾವಣೆ ನಡೆಸ್ತಾರಾ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಹಿತಕರ ಘಟನೆ ಮರುಕಳಿಸಿರುವುದಕ್ಕೆ ಮುಸ್ಲಿಂ ಗೂಂಡಾಗಳು ಕಾರಣ: ರೇಣುಕಾಚಾರ್ಯ