ಚೆನ್ನೈ: ಬಹು ನಿರೀಕ್ಷಿತ ದರ್ಬಾರ್ ಸಿನಿಮಾ ಫ್ಲಾಪ್ ನಂತರ ಇದೀಗ ತಮ್ಮ 168ನೇ ಸಿನಿಮಾಗೆ ಸೂಪರ್ ಸ್ಟಾರ್ ರಜನಿಕಾಂತ್ ತಯಾರಾಗಿದ್ದು, ರಜನಿ ಅಭಿಮಾನಿಗಳಲ್ಲಿ ಇದೀಗ ಮತ್ತೆ ಮಂದಹಾಸ ಮೂಡಿದೆ. ದರ್ಬಾರ್ ಸಿನಿಮಾ ಫ್ಲಾಪ್ ಆಗಿದ್ದರಿಂದ ಪರಿಹಾರ ನೀಡಬೇಕೆಂದು ನಿರ್ಮಾಪಕರು ಗದ್ದಲ ಎಬ್ಬಿಸಿದ್ದರು. ಇದೆಲ್ಲದರ ಮಧ್ಯೆ ರಜನಿಕಾಂತ್ ತಮ್ಮ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ನಡೆಸಿದ್ದು, ಇದರ ಮೋಷನ್ ಪೋಸ್ಟರ್ ಇದೀಗ ಸದ್ದು ಮಾಡುತ್ತಿದೆ.
ರಜನಿಕಾಂತ್ ಅವರ 168ನೇ ಸಿನಿಮಾದ ಟೈಟಲ್ ತುಂಬಾ ವಿಶಿಷ್ಟವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾಗೆ `ಅಣ್ಣಾಥೆ’ ಎಂದು ಹೆಸರಿಡಲಾಗಿದ್ದು, ಇದನ್ನು ಕೇಳಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈ ಚಿತ್ರವನ್ನು `ಸನ್ ಪಿಕ್ಚರ್ಸ್’ ನಿರ್ಮಿಸುತ್ತಿದ್ದು, ಮೋಷನ್ ಪೋಸ್ಟರ್ ಮೂಲಕ ಶೀರ್ಷಿಕೆಯನ್ನು ಘೋಷಣೆ ಮಾಡಲಾಗಿದೆ. ತಮಿಳಿನ ಯಶಸ್ವಿ ನಿರ್ದೇಶಕ ಸಿರುಥೈ ಸಿವಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ವಿಶೇಷವೆಂದರೆ ಸಿವ ಮತ್ತು ರಜನಿ ಇದೇ ಮೊದಲ ಬಾರಿಗೆ ಸಿನಿಮಾಗಾಗಿ ಒಂದಾಗುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ನಿಂದಲೇ ಚಿತ್ರ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.
ಈ ಸಿನಿಮಾದಲ್ಲಿ ನಯನತಾರಾ, ಖುಷ್ಬೂ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಸೂರಿ ಸೇರಿದಂತೆ ಬಹುತಾರಾಗಣವಿದೆ. ಡಿ ಇಮಾನ್ ಮೊದಲ ಬಾರಿಗೆ ಸೂಪರ್ ಸ್ಟಾರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಹಿರಿಯರಿಗೆ ಅಥವಾ ಪ್ರಭಾವಿ ವ್ಯಕ್ತಿಗಳಿಗೆ ತಮಿಳಿನಲ್ಲಿ `ಅಣ್ಣಾಥೆ’ ಎಂದು ಸಂಬೋಧಿಸುತ್ತಾರೆ. ಇದೇ ಹೆಸರನ್ನು ಸಿನಿಮಾಗೆ ಇಟ್ಟಿರುವುದರಿಂದ ರಜನಿ ಯಾವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಎಷ್ಟು ಪ್ರಭಾವಿ ವ್ಯಕ್ತಿಯಾಗಿರುತ್ತಾರೆ ಎಂಬುದು ಅಭಿಮಾನಿಗಹಳ ಕುತೂಹಲವಾಗಿದೆ.
ಅಲ್ಲದೆ ಇದೊಂದು ಕೌಟುಂಬಿಕ ಸಿನಿಮಾ ಆಗಿದ್ದು, ಅಣ್ಣನ ಪಾತ್ರದಲ್ಲಿ ರಜನಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳ ಸಹ ಕೇಳಿಬರುತ್ತಿವೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ರಜನಿಕಾಂತ್ ಪುತ್ರಿಯಾಗಿ ನಟಿಸುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಈ ಕುರಿತು ಯಾವುದೇ ಗುಟ್ಟನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ. ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಶೂಟಿಂಗ್ನತ್ತ ಚಿತ್ರ ತಂಡ ಮುಖ ಮಾಡಿದೆ.
ದರ್ಬಾರ್ ಸಿನಿಮಾದಲ್ಲಿ ರಜನಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಅಂತರಾಷ್ಟ್ರೀಯ ಡ್ರಗ್ಸ್ ದಂಧೆಕೋರ ರಜನಿ ಮಗಳನ್ನು ಸಾಯಿಸುತ್ತಾನೆ, ಇದಕ್ಕೆ ರಜನಿ ಪ್ರತಿಕಾರ ತೀರಿಸಿಕೊಳ್ಳುವುದು ಸಿನಿಮಾದ ಕಥೆಯಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಇದೀಗ ಅಣಾಥೆ ಮೂಲಕ ಮತ್ತೆ ಅಬ್ಬರಿಸಲು ಸೂಪರ್ ಸ್ಟಾರ್ ತಯಾರಿ ನಡೆಸಿದ್ದಾರೆ. ದರ್ಬಾರ್ನಲ್ಲಿ ರಜನಿಕಾಂತ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ನಯನತಾರಾ ಅವರೇ ಅಣ್ಣಾಥೆ ಸಿನಿಮಾದಲ್ಲಿ ರಜನಿ ಜೊತೆಯಾಗಲಿದ್ದಾರಂತೆ.