ರಾಮನಗರ: ನೂತನ ಕೆಪಿಸಿಸಿ ಅಧ್ಯಕ್ಷ ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಭಾನುವಾರ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಆಗಮಿಸಲಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಭಾನುವಾರದ ಕಾರ್ಯಕ್ರಮವನ್ನು ರದ್ದು ಮಾಡಿದ್ದರು. ಭಾನುವಾರ ಕನಕಪುರಕ್ಕೆ ಡಿಕೆಶಿ ಬರುತ್ತಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಡಿಕೆಶಿಯವರನ್ನು ನೋಡಿ ವಿಶ್ ಮಾಡಲು ಬೆಂಗಳೂರಿನ ನಿವಾಸಕ್ಕೆ ರಾಮನಗರ ಜಿಲ್ಲೆಯ ಕೈ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಳವಾಗಿತ್ತು.
ಅಲ್ಲದೆ ನಾಳೆ ಕೂಡ ಅಭಿಮಾನಿಗಳ ದಂಡೇ ಬೆಂಗಳೂರಿನ ಸದಾಶಿವನಗರದ ಮನೆಯತ್ತ ಮುಖ ಮಾಡಬಹುದಾದ ಹಿನ್ನೆಲೆಯಲ್ಲಿ ಡಿಕೆಶಿ ಭಾನುವಾರ ಕನಕಪುರಕ್ಕೆ ಆಗಮಿಸುತ್ತಿದ್ದಾರೆ. ಹಿಂದೆಯೇ ಕನಕಪುರಕ್ಕೆ ನಾನೇ ಬರುತ್ತೇನೆ. ನೀವು ಯಾರು ಬೆಂಗಳೂರಿಗೆ ಬರಬೇಡಿ ಎಂದು ತಿಳಿಸಿದ್ದ ಡಿಕೆಶಿಯವರು ಇದೀಗ ಅಭಿಮಾನಿಗಳ ಸಂಖ್ಯೆ ಹಿನ್ನೆಲೆಯಲ್ಲಿ ಕನಕಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ 4 ಗಂಟೆವರೆಗೂ ಕನಕಪುರ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ತಮ್ಮ ನೆಚ್ಚಿನ ನಾಯಕ ಬರುವಿಕೆಯ ವೇಳೆ ಅದ್ಧೂರಿ ಸ್ವಾಗತ ಕೋರಲು ಕೈ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸಿದ್ಧರಾಗಿದ್ದಾರೆ.