ಚಿಕ್ಕಮಗಳೂರು: ಜಿಲ್ಲೆಯ ಅಪ್ಪಟ ಬಯಲುಸೀಮೆ ಭಾಗವಾದ ಕಡೂರು ತಾಲೂಕಿನ ದೇವನೂರು ಗ್ರಾಮದ ಕೆರೆ 12 ವರ್ಷಗಳ ಬಳಿಕ ಕೋಡಿ ಬಿದ್ದಿದ್ದು ದೇವನೂರು ಹಾಗೂ ಸುತ್ತಮುತ್ತಲಿನ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಜ್ಜಂಪುರ ಹಾಗೂ ಕಡೂರು ಭಾಗದಲ್ಲೇ ಯತೇಚ್ಛವಾಗಿ ಮಳೆ ಸುರಿದಿದ್ದು ಕೆರೆ-ಕಟ್ಟೆ-ಹಳ್ಳ-ಕೊಳ್ಳಗಳು ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಡೂರು ತಾಲೂಕಿನ ದೇವನೂರು ಗ್ರಾಮದ ದೇವನೂರು ಕೆರೆ ಸುಮಾರು 350 ಎಕರೆಗೂ ಅಧಿಕ ಪ್ರದೇಶದಲ್ಲಿ ವಿಸ್ತಾರವಾಗಿದೆ. ಈ ಕೆರೆ ತುಂಬಿದರೆ ನಾಲ್ಕೈದು ವರ್ಷಗಳ ಕಾಲ ಈ ಭಾಗದ ಜನಸಾಮಾನ್ಯರು ಹಾಗೂ ದನಕರುಗಳಿಗೆ ಕುಡಿಯೋ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದನ್ನೂ ಓದಿ: ಸೆಪ್ಟೆಂಬರ್ 12ಕ್ಕೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
ಈ ಕೆರೆ ಕೋಡಿ ಬೀಳದೇ ಸುಮಾರು 12 ವರ್ಷಗಳೇ ಕಳೆದಿತ್ತು. ಕೆರೆಯ ತುಂಬಾ ಗಿಡಘಂಟೆಗಳು ಬೆಳೆದಿದ್ದವು. ಆದರೆ, ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ತುಂಬಿ ಸಮುದ್ರದಂತೆ ಕೋಡಿ ಬೀಳುತ್ತಿದೆ. ಈ ದೃಶ್ಯವನ್ನು ಸ್ಥಳಿಯರು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ, ಕೋಡಿ ಬಿದ್ದ ನೀರು ಎಲ್ಲೆಂದರಲ್ಲಿ ನುಗ್ಗುತ್ತಿರುವ ಪರಿಣಾಮ ಹೊಲ-ಗದ್ದೆ-ತೋಟಗಳು ಕೂಡ ಜಲಾವೃತಗೊಳ್ಳುತ್ತಿವೆ. ತೋಟಗಳಲ್ಲಿ ಎರಡ್ಮೂರು ಅಡಿ ನೀರು ನಿಲ್ಲುತ್ತಿದೆ. ಭತ್ತ, ಹತ್ತಿ, ಈರುಳ್ಳಿ ಎಲ್ಲಾ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿ ಮಣ್ಣು ಪಾಲಾಗಿದೆ. ಇದನ್ನೂ ಓದಿ: ಒಮ್ಮೆ ಕರ್ತವ್ಯ ಪಥ ನೋಡಿ ಭವಿಷ್ಯದ ಭಾರತ ನಿಮಗೆ ಇಲ್ಲಿ ಕಾಣುತ್ತದೆ: ಮೋದಿ
ಈಗ ಅಡಿಕೆಯನ್ನು ಕೊಯ್ಯುವ ಕಾಲ. ಈಗ ಹೀಗೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಅಡಿಕೆ ತೋಟದಲ್ಲೂ ನೀರು ನಿಲ್ಲುತ್ತಿದ್ದು ಶೀತಕ್ಕೆ ಅಡಿಕೆ ಕಾಯಿಗಳೂ ಉದುರುತ್ತಿವೆ. ಮರದಲ್ಲಿರುವ ಕಾಯಿಗಳನ್ನು ಕೊಯ್ಯಲು ಸಾಧ್ಯವಾಗುತ್ತಿಲ್ಲ. ಭಾರೀ ಮಳೆಯಿಂದ ಅಡಿಕೆ ತೋಟಗಳು ಜಲಾವೃತಗೊಂಡು ಬೆಳೆಗಾರರು ಕಂಗಾಲಾಗಿದ್ದಾರೆ. ಬಯಲುಸೀಮೆ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಯಿಂದ ರೈತರಿಗೆ ಒಂದೆಡೆ ಖುಷಿ ತಂದಿದೆ, ಮತ್ತೊಂದೆಡೆ ಆತಂಕ ತಂದಿದೆ. ತೋಟಗಳನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಸಣ್ಣ ಬೆಳೆಗಾರರು ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.