ಬೆಂಗಳೂರು: ಸುಗ್ಗಿ ಹಬ್ಬ ಮತ್ತೆ ಬಂದಿದ್ದು, ಸಂಭ್ರಮ ಸಡಗರವನ್ನ ಹೊತ್ತು ತಂದಿದೆ. ನಾಡಿನೆಲ್ಲೆಡೆ ಈಗಾಗಲೇ ಸಂಕ್ರಾಂತಿ ಹಬ್ಬ ಆಚರಣೆಯ ಸಿದ್ಧತೆ ಭರ್ಜರಿಯಾಗಿಯೇ ಸಾಗಿದೆ. ಈ ಮಧ್ಯೆ ನಟ-ನಟಿಯರು ಈ ಹಬ್ಬಕ್ಕೆ ಹೊಸ ಮೆರುಗು ನೀಡುತ್ತಿದ್ದಾರೆ.
ಬೆಂಗಳೂರಿನ ಕಾಕ್ಸ್ ಟೌನ್ ಗಂಗಮ್ಮ ದೇವಸ್ಥಾನದ ಆವರಣದಲ್ಲಿ ನಟಿ ತಾರಾ ಅನುರಾಧ ಅವರು ಸುಗ್ಗಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಬಿಬಿಎಂಪಿಯ ಬಡ ಪೌರ ಕಾರ್ಮಿಕರೊಂದಿಗೆ ಹಬ್ಬದಲ್ಲಿ ಭಾಗಿಯಾಗಿ ಸರಳತೆ ಮೆರೆದರು.
ಪೌರ ಕಾರ್ಮಿಕರೊಂದಿಗೆ ಹುಗ್ಗಿ(ಪೊಂಗಲ್) ತಯಾರಿಸಿ, ಸಿಬ್ಬಂದಿಗೆ ಸೀರೆ, ಸಿಹಿ ತಿನಿಸು ಹಾಗೂ ಕಬ್ಬು ವಿತರಿಸಿದರು. ಜೊತೆಗೆ ಪೌರ ಕಾರ್ಮಿಕರಿಂದ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಈ ವೇಳೆ ಭಾರತಿನಗರ ನಾಗರಿಕರ ವೇದಿಕೆ ಅಧ್ಯಕ್ಷ ಎನ್.ಎಸ್ ರವಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.