– ಕೊಪ್ಪಳದಲ್ಲಿ ಸುದೀಪ್-ಯಶ್ ಅಭಿಮಾನಿಗಳ ಕಿತ್ತಾಟ
ಯಾದಗಿರಿ/ಕೊಪ್ಪಳ: ಸೋಮವಾರದಂದು ಜಿಲ್ಲೆಯಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮಕ್ಕೆ ನಟ ಯಶ್ ಐದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ ರೊಚ್ಚಿಗೆದ್ದ ರೈತರು ಹಾಗೂ ಅಭಿಮಾನಿಗಳು ಕುರ್ಚಿಗಳನ್ನ ಧ್ವಂಸ ಮಾಡಿದ್ದಾರೆ.
ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಯಶ್ ರಾತ್ರಿ 9.30ಕ್ಕೆ ಆಗಮಿಸಿದ್ರು. ಯಶ್ ವೇದಿಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದರು. ಇದ್ರಿಂದ ಕೇವಲ 10 ನಿಮಿಷದಲ್ಲಿ ನಟ ಯಶ್ ತಮ್ಮ ಭಾಷಣ ಮುಗಿಸಿದ್ರು. ಇದಕ್ಕೂ ಮುನ್ನ ಸುರಪುರದ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಯಶ್ ಕಾರನ್ನ ಅಭಿಮಾನಿಗಳು ಜಖಂಗೊಳಿಸಿದ್ದಾರೆ.
ರಾಯಚೂರಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೂ ನಟ ಯಶ್ ತಡವಾಗಿ ಬಂದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರು. ಯಶ್ ನೋಡುವ ಕಾತುರದಿಂದ ಬಂದಿದ್ದ ಅಭಿಮಾನಿಯೊಬ್ಬ ಗಾಯಗೊಂಡು ಅಸ್ವಸ್ಥಗೊಂಡಿದ್ದರು.
ಅತ್ತ ಕೊಪ್ಪಳದಲ್ಲಿ ಸುದೀಪ್, ಯಶ್ ಅಭಿಮಾನಿಗಳು ಕಟೌಟ್ ಸಂಬಂಧವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಯಶ್ ಅಭಿಮಾನಿಗಳು 30 ಅಡಿ ಕಟೌಟ್ ಹಾಕಿದ್ದು, ಸುದೀಪ್ ಅಭಿಮಾನಿಗಳು 40 ಅಡಿ ಫ್ಲೇಕ್ಸ್ ಹಾಕಲು ಮುಂದಾದಾಗ ಮಾತಿನ ಚಕಮಕಿ ನಡೆದು ಘರ್ಷಣೆ ನಡೆದಿದೆ. ಬಳಿಕ ಎರಡು ಗುಂಪಿನವರು ಹಾಕಿದ್ದ ಕಟೌಟ್ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.