ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಭಾರತದಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಮಧ್ಯೆ ನಟ ಯಶ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ಭೇಟಿ ಮಾಡಿದ್ದು, ಅವರ ಬಳಿ ಒಂದು ಮನವಿ ಮಾಡಿದ್ದಾರೆ.
ಟಾಲಿವುಡ್ ನಟ ಬಾಲಕೃಷ್ಣ ಅವರು ಅಭಿನಯಿಸಿರುವ ‘ಎನ್.ಟಿ.ಆರ್ ಕಥಾನಾಯಕಡು’ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಯ್ಯ ಮತ್ತು ಅವರ ತಂಡ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ನಟ ಯಶ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ನಟ ಯಶ್ ಬಾಲಿವುಡ್ ನಟಿ ವಿದ್ಯಾ ಬಾಲನ್ ಬಳಿ ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ನಟ ಯಶ್, “ನಿಮ್ಮ ಸಿನಿಮಾಗಳನ್ನ ನಾನು ನೋಡಿ ಬೆಳೆದಿದ್ದೇನೆ. ನಿಮ್ಮ ಕೆಲಸಗಳನ್ನ ನೋಡಿದ್ದೇನೆ. ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಮುಂದೆ ನೀವು ನಮ್ಮ ಕನ್ನಡ ಸಿನಿಮಾದಲ್ಲೂ ಅಭಿನಯಿಸಿ” ಎಂದು ಯಶ್ ಕೇಳಿದರು. ಅದಕ್ಕೆ ನಟಿ ವಿದ್ಯಾಬಾಲನ್ ‘ನೀವು ನನಗೆ ಆಫರ್ ಕೊಡಿ’ ಎಂದು ಪ್ರತಿಕ್ರಿಯಿಸಿದ್ದಾರೆ.
ಬಾಲಯ್ಯ ಅವರನ್ನು ಇವತ್ತೇ ನಾನು ಮೊದಲ ಬಾರಿಗೆ ನೋಡಿದ್ದು, ಅವರ ಸಿನಿಮಾವನ್ನು ನೋಡಿದ್ದೇವೆ. ತುಂಬಾ ಖುಷಿಯಾಯಿತು. ನಾವು ಏನು ಕೊಡುತ್ತೇವೆ ಅದನ್ನು ವಾಪಸ್ ಬರುವ ರೀತಿ ಬೆಳೆಯುವುದೇ ಸ್ನೇಹವಾಗಿದೆ. ನಮ್ಮ ಕೆಜಿಎಫ್ ಸಿನಿಮಾಕ್ಕೆ ತೆಲುಗಿನಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದು ಬಾಲಯ್ಯ ಅವರ ಬಗ್ಗೆ ಮಾತನಾಡಿದ್ದರು.
ಎನ್.ಟಿ.ಆರ್ ಕಥಾನಾಯಕಡು ಚಿತ್ರದಲ್ಲಿ ವಿದ್ಯಾಬಾಲನ್ ಅವರು ಎನ್.ಟಿ.ಆರ್ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್, ಬಾಲಯ್ಯ, ಹಾಗೂ ವಿದ್ಯಾ ಬಾಲನ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.