ಕೋಲಾರ: ಶಾಂತಿ ಮತ್ತು ಸೌಹಾರ್ದತೆಗಾಗಿ ಓಟ ಎಂಬ ಘೋಷವಾಕ್ಯದ ಅಡಿ ಭಾನುವಾರ ನಗರದಲ್ಲಿ `ಒಲಿಂಪಿಕ್ ಡೇ ರನ್-2018′ ಓಟವನ್ನು ಆಯೋಜಿಸಲಾಗಿತ್ತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಬೆಂಗಳೂರು, ಕೋಲಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಒಲಿಂಪಿಕ್ ಡೇ ರನ್-2018 ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಒಲಿಂಪಿಕ್ ಡೇ ರನ್-2018 ಕಾರ್ಯಕ್ರಮವನ್ನು ಸ್ಯಾಂಡಲ್ವುಡ್ ನಟ ನೆನಪಿರಲಿ ಪ್ರೇಮ್ ಚಾಲನೆ ನೀಡಿ ಕ್ರೀಡಾಭಿಮಾನಿಗಳನ್ನ ಪ್ರೋತ್ಸಾಹಿಸಿದರು. ಈ ವೇಳೆ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಒಲಿಂಪಿಕ್ ನಲ್ಲಿ ಭಾರತ ಹೆಚ್ಚು ಹೆಚ್ಚು ಚಿನ್ನದ ಪದಕಗಳನ್ನ ಗಳಿಸಲಿ ಎಂದು ಹಾರೈಸಿದರು.
ಇನ್ನೂ ಸ್ಯಾಂಡಲ್ ವುಡ್ನಲ್ಲಿ ಎದ್ದಿರುವ ದಿ ಬಾಸ್ ಹಾಗೂ ವಿಲನ್ ಸಿನಿಮಾ ಕಾಂಟ್ರವರ್ಸಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಕೇವಲ ಕ್ರೀಡೆ ಬಗ್ಗೆ ಮಾತ್ರ ಮಾತನಾಡುತ್ತೇನೆ, ಬೆಳ್ ಬೆಳಗ್ಗೆ ಒಳ್ಳೆಯದನ್ನು ಮಾತ್ರ ಮಾತನಾಡಬೇಕು ಎಂದು ಬೆಳ್ಳಿ ತೆರೆಯ ಗಾಸಿಪ್ ಸುದ್ದಿಗೆ ತೆರೆ ಎಳೆದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ನಿಂದ ಪ್ರಾರಂಭಿಸಿ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದವರೆಗೂ ಕ್ರೀಡಾಭಿಮಾನಿಗಳು, ಯುವಕ-ಯುವತಿಯರು, ಪುರುಷ-ಮಹಿಳೆಯರು, ನೌಕರರು, ಕ್ರೀಡಾಪಟುಗಳು ಸೇರಿದಂತೆ ನೂರಾರು ಮಂದಿ ಒಲಿಂಪಿಕ್ ಓಟದಲ್ಲಿ ಭಾಗವಹಿಸಿದ್ದರು.
ಈ ವೇಳೆ ಎಂಎಲ್ಸಿ ಗೋವಿಂದ ರಾಜು, ಪ್ರಭಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ರೋಹಿಣಿ ಕಟೋಚ್ ಸಪೆಟ್ ಕೂಡ ಒಲಿಂಪಿಕ್ ಡೇ ಓಟದಲ್ಲಿ ಪಾಲ್ಗೊಂಡಿದ್ದರು.