ಬಾಗಲಕೋಟೆ: ಉಗ್ರ ಚವಟುವಟಿಕೆಯಲ್ಲಿ ಭಾಗಿಯಾಗುವಂತೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪತ್ರ ಬರೆದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆ ಗಜೇಂದ್ರಗಢ ಪಟ್ಟಣ್ಣದ ಬಳಿ ನಡೆದಿದ್ದು, ಯುವಕನನ್ನ ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರಣಪ್ಪ ನಾಗರಾಳ ಎಂಬ ಯುವಕ ಗದಗ ಜಿಲ್ಲೆಯ ಗಜೇಂದ್ರಗಢ ಬಳಿ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಆತನನ್ನ ಗಜೇಂದ್ರಗಢ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆ ಸಿಗದ ಕಾರಣ ಶರಣಪ್ಪನನ್ನ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ನಂತರ ಚೇತರಿಸಿಕೊಂಡ ಶರಣಪ್ಪ, ಮಹಮದ್ ರಫೀಕ್ ಹಾಗೂ ಇಸ್ಮಾಯಿಲ್ ನನ್ನನ್ನ ಅಪಹರಣ ಮಾಡಿ ಕರೆದೊಯ್ದು ಚಿತ್ರ ಹಿಂಸೆ ಕೊಡ್ತಿದ್ರಲ್ಲದೆ ಅವರೇ ಮೇಲ್ ಐಡಿ ಕ್ರಿಯೆಟ್ ಮಾಡಿ, ಮೇಲ್ ಮೂಲಕ ನನ್ನ ಕರೆಯಿಸಿಕೊಂಡು ಟೆರರಿಸಂ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುತ್ತಿದ್ದರು ಎಂದಿದ್ದಾನೆ. ನಾನು ಓದುತ್ತಿದ್ದ ವಿದ್ಯಾ ವಿಕಾಸ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬಾಂಬ್ ಇಡುವಂತೆ ಬೆದರಿಸುತ್ತಿದ್ದರು ಎಂದು ಆರೋಪಿಸ್ತಿದ್ದಾನೆ. ಅಲ್ಲದೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಶಾಕ್ ಟ್ರೀಟ್ ಮೆಂಟ್ ನೀಡಿದ್ದಾರೆಂದು ತಿಳಿಸಿದ್ದಾನೆ.
ಮಹ್ಮದ್ ರಫೀಕ್, ಇಸ್ಮಾಯಿಲ್ ಎಂಬುವರ ಹೆಸರು ಮಾತ್ರ ಹೇಳುತ್ತಿರುವ ಯುವಕ ಅವರ ಪರಿಚಯ ಹೇಗಾಯ್ತು, ಅವರು ಎಲ್ಲಿಯವರು ಎಂದು ಸ್ಪಷ್ಟಪಡಿಸುತ್ತಿಲ್ಲ. ಹೀಗಾಗಿ ಶರಣಪ್ಪನ ಮಾತುಗಳು ಗೊಂದಲಮಯವಾಗಿವೆ. ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೋಡಿಹಾಳ ಗ್ರಾಮದ ನಿವಾಸಿಯಾಗಿರೋ ಶರಣಪ್ಪ, ಮೈಸೂರಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ. ಜೊತೆಗೆ ಫೇಸ್ ಬುಕ್ ಸ್ಟೇಟಸ್ ನಲ್ಲಿ ಲಾಸ್ಟ್ ಡೇ ಬಾಯ್ ಬಾಯ್. ಲವ್ ಯೂ ಆಲ್ ಎಂದು ಬರೆದುಕೊಂಡಿದ್ದ.
ಇನ್ನು ಈ ಬಗ್ಗೆ ಆತನ ಸಹೋದರ ಹನುಮಂತ, ತಮ್ಮನಾದ ಶರಣಪ್ಪನಿಗೆ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಹಿಂದೆಯೂ ಕೂಡ ಈತನಿಗೆ ಚಿಕಿತ್ಸೆ ಕೊಡಿಸಿದ್ದೆವು. ಪತ್ರದ ಬಗ್ಗೆ ನನಗೇನು ಗೊತ್ತಿಲ್ಲ. ಟೆರರಿಸ್ಟ್ ಬೆದರಿಕೆಯೆಲ್ಲ ಸುಳ್ಳಿರಬಹುದು. ಈ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ನಂತರವಷ್ಟೇ ಇದರ ಸತ್ಯಾಂಶ ಬಯಲಾಗಬೇಕಿದೆ.