ಚಿಕ್ಕಮಗಳೂರು: ಹೆರಿಗೆಯಾಗಿದ್ದ ಬಾಣಂತಿ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು (Chikkamagaluru) ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ರಂಜಿತಾ ಬಾಯಿ (21) ಮೃತ ದುರ್ದೈವಿ. ಶನಿವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದ ಈಕೆ ರಾತ್ರಿ ವೇಳೆಗೆ ತೀವ್ರ ಹೊಟ್ಟೆನೋವಿನಿಂದ ನರಳಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬಾಣಂತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಮಗನ ಎಂಪಿ ಮಾಡಲು ನನ್ನ ಮೇಲೆ ಆರೋಪ ಮಾಡ್ತಿದ್ದೀರಿ: ಸಿದ್ದು ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ
ರಂಜಿತಾ ಮೂಲತಃ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ವಡೇರಹಳ್ಳಿ ತಾಂಡ್ಯದ ನಿವಾಸಿ, ಒಂದು ವರ್ಷದ ಹಿಂದೆಯಷ್ಟೇ ಶಶಿಧರ್ ನಾಯಕ್ ಎಂಬವರೊಂದಿಗೆ ವಿವಾಹವಾಗಿದ್ದರು.
ಚಲಿಸುತ್ತಿದ್ದ ಅಂಬುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ:
ಮತ್ತೊಂದು ಘಟನೆಯಲ್ಲಿ ತುಂಬುಗರ್ಭಿಣಿಯನ್ನ ಹೆರಿಗೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅಂಬುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ ಚಿತ್ರ ಬಳಸಿ ಅಪಮಾನ – ಕಾಂಗ್ರೆಸ್ನಿಂದ ದೂರು
ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಬೆಳಗೋಡು ಗ್ರಾಮದ ಮಹಿಳೆಯನ್ನ 108 ಅಂಬುಲೆನ್ಸ್ನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಹಿಳೆಗೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆ ತಲುಪಲು ಇನ್ನೂ 15 ಕಿ.ಮೀ. ದೂರವಿರುವಾಗಲೇ ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ಚಾಲಕ ಗಂಗಾಧರನಾಯ್ಕ ವಾಹನವನ್ನು ವೇಗವಾಗಿ ಚಲಾಯಿಸಿದ್ದಾರೆ. ಆದಾಗ್ಯೂ ಮಹಿಳೆ ಚೀರಾಡಿದ್ದಾಳೆ, ಕೊನೆಗೆ ಶುಶ್ರೂಷಕಿ ಮಂಜುಳಾ ಅಂಬುಲೆನ್ಸ್ನಲ್ಲೇ ಮಹಿಳೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ಮಗುವಿಗೆ ಜನ್ಮ ನೀಡಿದ ಬಳಿಕ ಅಂಬುಲೆನ್ಸ್ನಲ್ಲೇ ಪ್ರಥಮ ಚಿಕಿತ್ಸೆ ನೀಡಿ, ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆಂದು ಮಹಿಳೆಯ ಪತಿ ತಿಳಿಸಿದ್ದಾರೆ. ಇದರಿಂದ ಶುಶ್ರೂಷಕಿ ಮಂಜುಳಾ ಹಾಗೂ ಚಾಲಕ ಗಂಗಾಧರ್ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.