ಶಿವಮೊಗ್ಗ: ಚುನಾವಣೆಗೆ ಮೊದಲು ಸ್ವಚ್ಛ, ದಕ್ಷ, ಪ್ರಾಮಾಣಿಕ ರಾಜಕಾರಣಕ್ಕೆ ಜಾತಿ ಅಡ್ಡಿ ಬರುತ್ತದೆ. ಅಭಿವೃದ್ಧಿ ಹಾಗು ಪ್ರಾಮಾಣಿಕತೆಯನ್ನು ಜನ ಮೆಚ್ಚಿಕೊಳ್ಳುವುದಿಲ್ಲವೆನೋ, ಚುನಾವಣೆಯಲ್ಲಿ ಜಾತಿಯೇ ಪ್ರಾಮುಖ್ಯತೆ ವಹಿಸುತ್ತದೆ ಎಂದುಕೊಂಡಿದ್ದೆ. ಆದರೆ ಎಕ್ಸಿಟ್ ಪೋಲ್ ಹೇಳಿದ ರೀತಿಯಲ್ಲಿಯೇ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಗೂಂಡಾಗಿರಿಯನ್ನು ದಮನಗೊಳಿಸಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆ ರಾಜ್ಯಕ್ಕೆ ವಿಶೇಷ ಆಸಕ್ತಿ ಹಾಗೂ ಅಭಿವೃದ್ಧಿ ಮಾಡಿರುವುದಕ್ಕೆ ಜನತೆ ಮತ ಹಾಕಿದ್ದಾರೆ ಎಂದರು. ಇದನ್ನೂ ಓದಿ: ಮೌನವಾಗಿರುವ ಬಿಜೆಪಿ ಮತದಾರರು ದೊಡ್ಡ ಸಂದೇಶ ಕೊಟ್ಟಿದ್ದಾರೆ: ತೇಜಸ್ವಿ ಸೂರ್ಯ
ನೂರಕ್ಕೆ ನೂರರಷ್ಟು ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರದಲ್ಲಿ ಗೆಲ್ಲುತ್ತೇವೆ. ಗೋವಾದಲ್ಲಿ ಸ್ವಲ್ಪಮಟ್ಟಿಗೆ ಫಲಿತಾಂಶ ಏರಿಳಿತ ಕಾಣುತ್ತಿದೆ. ಹಾಗಂತ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಅನಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಪ್ರದೇಶದಲ್ಲಿ ಸ್ವಚ್ಛ, ಪ್ರಾಮಾಣಿಕ ಆಡಳಿತಕ್ಕೆ ಜನತೆ ಮತ ಹಾಕಿದ್ದಾರೆ. ಬಿಜೆಪಿ ಪರವಾಗಿ ಆ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಸಕನಾಗಿ, ಸಂಸದನಾಗಿ ಹಾಗೂ ಮಂತ್ರಿಯಾಗಿ ಸರಿಯಾಗಿ ಕೆಲಸ ಮಾಡದಿದ್ದರೆ ಬಿಜೆಪಿ ಮನ್ನಣೆ ಹಾಕುವುದಿಲ್ಲ. ಬಿಜೆಪಿ ಅಭಿವೃದ್ಧಿಗೆ, ಸಂಸ್ಕಾರಕ್ಕೆ, ಬದ್ಧತೆಗೆ ಟಿಕೆಟ್ ಕೊಡುತ್ತದೆ. ಈಗ ಆ ಪ್ರಯತ್ನ ಮಾಡಿದ್ದೇವೆ. ಭವಿಷ್ಯದಲ್ಲಿಯೂ ಅದನ್ನೇ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪಾದಯಾತ್ರೆ ನಿಲ್ಲಿಸಿ ತೀರ್ಥಯಾತ್ರೆ ಮಾಡಿ – ಕಾಂಗ್ರೆಸ್ಗೆ ಆರ್.ಅಶೋಕ್ ಸಲಹೆ