ಈವರೆಗೂ ನಟಿ ವಿಜಯಲಕ್ಷ್ಮಿ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದ ನಾಮ್ ತಮಿಳರ್ ಕಚ್ಚಿ (ಎನ್.ಟಿ.ಕೆ) ಅಧ್ಯಕ್ಷ ಸೀಮಾನ್ (Seeman), ಇದೀಗ ಕಾವೇರಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಟ ಸಿದ್ಧಾರ್ಥ ಅವರ ಪತ್ರಿಕಾಗೋಷ್ಠಿಗೆ ಕನ್ನಡಪರ ಕೆಲ ಹೋರಾಟಗಾರರು ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಸೀಮಾನ್, ಎಚ್ಚರಿಕೆಯನ್ನು ನೀಡಿದ್ದಾರೆ.
ಕಲಾವಿದರಿಗೂ ಕಾವೇರಿ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಅವರು ಕಲಾವಿದರು ಮಾತ್ರ. ನಟ ಸಿದ್ಧಾರ್ಥ (Siddharth) ಕೂಡ ಒಬ್ಬ ಕಲಾವಿದ. ಅವರ ಕೆಲಸಕ್ಕೆ ಅಡ್ಡಿ ಪಡಿಸಿರುವುದು ಸರಿಯಾದದ್ದು ಅಲ್ಲ. ಕಾವೇರಿ ವಿಷಯವನ್ನು ರಾಜಕಾರಣಿಗಳು ಕೂತು ಮಾತನಾಡಲಿ. ಕಲಾವಿದರನ್ನು ಹೀಗೆ ಅವಮಾನಿಸಿದರೆ, ಕನ್ನಡ ಸಿನಿಮಾಗಳನ್ನು (Sandalwood) ತಮಿಳು ನಾಡಿನಲ್ಲಿ ತಡೆಯಲು ಕೆಲವೇ ನಿಮಿಷ ಸಾಕು ಎಂದಿದ್ದಾರೆ ಸೀಮಾನ್.
ಕನ್ನಡದ ಸಿನಿಮಾಗಳು ಬಂದಾಗ ನಾವು ಸ್ವಾಗತಿಸಿದ್ದೇವೆ. ಕೆಜಿಎಫ್ ರೀತಿಯ ಚಿತ್ರಗಳನ್ನು ಗೆಲ್ಲಿಸಿದ್ದೇವೆ. ಕಲಾವಿದರ ವಿಷಯದಲ್ಲಿ ರಾಜಕೀಯ ಮಾಡಿದರೆ, ಕನ್ನಡ ಸಿನಿಮಾಗಳನ್ನು ನಾವೂ ಇಲ್ಲಿ ತಡೆ ಹಿಡಿಯುತ್ತೇವೆ. ನಾನು ಒಂದು ಹೇಳಿಕೆ ನೀಡಿದರೆ ಸಾಕು, ಕನ್ನಡ ಚಿತ್ರಗಳು ಇಲ್ಲಿ ಬಿಡುಗಡೆಯೇ ಆಗುವುದಿಲ್ಲ ಎನ್ನುವುದು ಸೀಮಾನ್ ಮಾತು.
ಸಿದ್ಧಾರ್ಥ್ ಅವರ ಪತ್ರಿಕಾಗೋಷ್ಠಿಗೆ ಅಡ್ಡ ಪಡಿಸಿದ್ದಕ್ಕಾಗಿ ಈಗಾಗಲೇ ನಟ ಶಿವರಾಜ್ ಕುಮಾರ್ ಕ್ಷಮೆ ಕೇಳಿದ್ದಾರೆ. ಪ್ರಕಾಶ್ ರಾಜ್ ಕೂಡ ಖಂಡಿಸಿದ್ದಾರೆ. ಹಲವರು ಬೇಸರವನ್ನೂ ವ್ಯಕ್ತ ಪಡಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಯಾದರೂ, ತಮಿಳು ನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ತಡೆಯೊಡ್ಡಬಹುದಾ ಎನ್ನುವ ಅನುಮಾನ ಮೂಡಿದೆ.
Web Stories