ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ‘ರಂಜಾನ್’ (Ramzan) ಸಿನಿಮಾವು ಹಿರಿಯ ಲೇಖಕ ಫಕೀರ್ಮುಹಮ್ಮದ್ ಕಟ್ಪಾಡಿ ಬರೆದಿರುವ ‘ನೊಂಬು’ ಕಥೆಯನ್ನು ಆಧರಿಸಿದೆ. ‘ಸಿಲ್ಲಿ ಲಲ್ಲಿ’ ಹಾಗೂ ಸುಮಾರು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಹಾಗೂ ಕೆಎಎಸ್ ಅಧಿಕಾರಿಯೂ ಆಗಿರುವ ಸಂಗಮೇಶ ಉಪಾಸೆ (Sangamesh Upase) ಮೊದಲ ಬಾರಿ ನಾಯಕನಾಗಿ ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ಜತೆಗೆ ಚಿತ್ರಕಥೆ-ಸಂಭಾಷಣೆ ಹಾಗೂ ಸಾಹಿತ್ಯ ಒದಗಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಪಂಚಾಕ್ಷರಿ.ಸಿ (Panchakshari C) ಈ ನಿರ್ದೇಶನ ಮಾಡಿದ್ದಾರೆ. ಯೂನಿವರ್ಸಲ್ ಸ್ಟುಡಿಯೋ ಮೂಲಕ ಮಡಿವಾಳಪ್ಪ.ಎಂ.ಗೂಗಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಪ್ರಚಾರದ ಮೊದಲ ಹಂತವಾಗಿ ನಾಲ್ಕು ಹಾಡುಗಳು, ಟ್ರೇಲರ್ (Trailer) ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸ್ವಾಮಿಗಳು, ಮೌಲ್ವಿಗಳು ಮತ್ತು ಪಾದ್ರಿಗಳು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದು ವಿಶೇಷವೆನಿಸಿತ್ತು.
ಬಡತನ, ಶ್ರೀಮಂತ ವ್ಯತ್ಯಾಸದ ಸೂಕ್ಷತೆ ಹೊಂದಿದ್ದು, ಈ ದೇಶದ ಹಲವಾರು ಹಸಿದವರ, ಉಪವಾಸವಿದ್ದವರ, ದಮನಿತರ, ದಲಿತರ, ಬಡವರ, ಹಿಂದುಳಿದವರ ಶಿಕ್ಷಣದ, ಆರೋಗ್ಯದ, ನೆಲದ ಹಕ್ಕಿನ ಅಂಶಗಳು ಇರಲಿದೆ. ಹಾಗೂ ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್, ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆಯನ್ನು, ಉಳ್ಳವರು ಮತ್ತು ಇಲ್ಲದವರ ಎರಡು ಕುಟುಂಬಗಳ ಮಧ್ಯೆ ಹೋಲಿಕೆ ಮಾಡುವ ಸನ್ನಿವೇಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದನ್ನೂ ಓದಿ:ಗಾಯಕನಿಂದಲೇ ನಟಿ ಆಕಾಂಕ್ಷ ಕೊಲೆ : ತಾಯಿಯ ಗಂಭೀರ ಆರೋಪ
ಪತ್ನಿಯಾಗಿ ಪ್ರೇಮಾವತಿ ಉಪಾಸೆ, ಮಗಳಾಗಿ ಬೇಬಿ ಈಶಾನಿಉಪಾಸೆ, ಮಗನಾಗಿ ಮಾಸ್ಟರ್ ವೇದಿಕ್ ಉಳಿದಂತೆ ಭಾಸ್ಕರ್ ಮಣಿಪಾಲ್, ಮಾಸ್ಟರ್ ನೀಲ್, ಜಯಲಕ್ಷಿ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾ ಭಟ್ ಮುಂತಾದವರು ನಟಿಸಿದ್ದಾರೆ.
ಸಂಗೀತ ಇಂದ್ರ, ಛಾಯಾಗ್ರಹಣ ರಂಗಸ್ವಾಮಿ.ಜಿ, ಸಂಕಲನ ಡಿ.ಮಲ್ಲಿ, ಮಿಕ್ಸಿಂಗ್ ಪಳನಿ.ಡಿ.ಸೇನಾಪತಿ ಅವರದಾಗಿದೆ. ರವೀಂದ್ರ ಸೊರಗಾವಿ, ಶಶಾಂಕ್ ಶೇಷಗಿರಿ, ಕಡಬಗೆರೆ ಮುನಿರಾಜು, ಹರ್ಷ ಆಧಿಬಟ್ಲಾ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಮಂಗಳೂರು, ಉಡುಪಿ, ಕಟ್ಪಾಡಿ, ಗುಲ್ವಾಡಿ, ಕುಂದಾಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ನಿಂದ ಪ್ರಶಂಸೆಗೆ ಒಳಪಟ್ಟು ‘ಯು’ ಪ್ರಮಾಣಪತ್ರ ಪಡೆದುಕೊಂಡಿರುವ ಚಿತ್ರವನ್ನು ಏಪ್ರಿಲ್ದಲ್ಲಿ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.