ಚಾಮರಾಜನಗರ: ಜಿಲ್ಲಾಸ್ಪತ್ರೆ ಎಂದರೆ ಸಕಲ ಸವಲತ್ತು ಸಿಕ್ಕಿ ತಮಗೆ ಬಂದಿರುವ ರೋಗಗಳು ವಾಸಿ ಆಗುತ್ತವೆ ಎಂದು ರೋಗಿಗಳು ಹೋಗುತ್ತಾರೆ. ಆದರೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಔಷಧಿ ಚೀಟಿಗೂ ಹಣವಿಲ್ಲವೇನೋ ಎನ್ನುವ ಹಾಗಿದೆ.
ಅರೇ, ಇವರು ಯಾಕಪ್ಪ ಹೀಗೆ ತುಂಡು ಚೀಟಿಗಳನ್ನು ಹಿಡಿದುಕೊಂಡು ನಿಂತಿದ್ದಾರೆ ಎಂದು ನೀವು ಅಂದುಕೊಂಡಿದ್ದೀರ? ಇದು ವೇಸ್ಟ್ ಪೇಪರ್ ಅಲ್ಲಾ ರೀ. ಔಷಧಿ ಬರೆಯೋಕೆ ಬಳಸುವ ಚೀಟಿ. ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಗಳಿಗೆ ಬರ ಬಂದಿದೆ. ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಿಂದ ಔಷಧಿಗಳ ಹೆಸರು ಬರೆಯೋಕೆ ಚೀಟಿ ಇಲ್ಲದೇ ವೈದ್ಯರು ಚಿಕ್ಕ ಚಿಕ್ಕ ಬಿಳಿ ಹಾಳೆಗಳ ಮೇಲೆ ಔಷಧಿಗಳ ಹೆಸರನ್ನು ಬರೆದುಕೊಡುತ್ತಿದ್ದಾರೆ. ಅಷ್ಟೇ ಅಲ್ಲ ವೈದ್ಯರು ಬರೆಯೋ ನೋಟ್ ಬುಕ್ ಗಳು ಖಾಲಿಯಾಗಿ ಗಾಳಿ ತೂರುವ ಹಾಳೆಗಳ ಮೇಲೆ ನೋಟ್ಸ್ ಬರೆದುಕೊಳುತ್ತಿದ್ದಾರೆ. ನಾಲ್ಕಾಣೆ ಪೇಪರ್ ತರಲು ಇವರ ಹತ್ತಿರ ದುಡ್ಡಿಲ್ವಾ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆಲ್ಲಾ ಕಾರಣ ಡೀನ್ ಚಂದ್ರಶೇಖರ್. ಏಕೆಂದರೆ ಕಳೆದ ನಾಲ್ಕೈದು ತಿಂಗಳಿಂದ ಬಿಲ್ ಬುಕ್ ಗಳಿಗೆ ಸಹಿ ಹಾಕದ ಕಾರಣ ಇಲ್ಲಿಗೆ ಔಷಧಿ ಚೀಟಿಗಳು ಸೇರಿದಂತೆ ಮೊದಲಾದ ಸಾಮಾಗ್ರಿಗಳು ಗುತ್ತಿಗೆದಾರರಿಂದ ಬಂದಿಲ್ಲ. ಹೀಗಾಗಿ ವೈದ್ಯರಿಗೆ ಹರುಕು ಮುರುಕು ಚೀಟಿಯೇ ಗತಿ. ರೋಗಿಗಳು ಈ ಚೀಟಿನ ತಗೊಂಡು ಮೆಡಿಕಲ್ ಶಾಪ್ ಗೆ ಹೋದರೆ ಶಾಪ್ ನ ಸಿಬ್ಬಂದಿ ಔಷಧಿ ಕೊಡೋಕೆ ಹಿಂದು ಮುಂದು ನೋಡುತ್ತಾರೆ. ಇದು ವೈದ್ಯರು ಬರೆದಿರೋದಲ್ಲ ನೀವೆ ಬರೆದು ತಂದಿದ್ದೀರಾ ಎಂದು ರೋಗಿಗಳಿಗೆ ಬೈದು ಕಳುಹಿಸುತ್ತಿದ್ದಾರೆ.
ಇನ್ನಾದ್ದರೂ ಡೀನ್ ಈ ಬಗ್ಗೆ ಎಚ್ಚೆತ್ತುಕೊಂಡು ಬಿಲ್ ಗಳಿಗೆ ಸಹಿ ಹಾಕಿ ಆಸ್ಪತ್ರೆಗೆ ಬೇಕಾಗಿರುವ ಆಗತ್ಯ ವಸ್ತುಗಳನ್ನು ತರಿಸಿಕೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹ.