ಬಾಗಲಕೋಟೆ: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಟೀ ಶರ್ಟ್ ಬಂಡಲ್ (T Shirt) ಇದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ಬಾಗಲಕೋಟೆ (Bagalkote) ನಗರದ ಬಸವೇಶ್ವರ ಸರ್ಕಲ್ (Basaveshwar Circle) ಬಳಿ ನಡೆದಿದೆ.
ನಗರದ ಬಸವೇಶ್ವರ್ ಸರ್ಕಲ್ ಬಳಿಯ ಪ್ರಭು ನಾರಾ ಎಂಬ ವ್ಯಾಪಾರಸ್ಥರ ಗೋದಾಮಿನಲ್ಲಿದ್ದ ಕಾರು ಒಂದರಲ್ಲಿ ಟೀಶರ್ಟ್ ಬಂಡಲ್ ಇರುವುದು ಪತ್ತೆಯಾಗಿದೆ. ನಾರಾ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಿಕಟವರ್ತಿಯಾಗಿದ್ದು, ಮತದಾರರಿಗೆ ಟೀ ಶರ್ಟ್ ಉಡುಗೊರೆ ನೀಡಲು ತರಿಸಿದ್ದಾರೆಂದು ಆರೋಪಿಸಿ, ಕೇಸ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ತಪಾಸಣೆ ನಡೆಸಿ ಅವರ ವಿರುದ್ಧ ದೂರು ದಾಖಲಿಸಿ ಎಂದು ಪೊಲೀಸರಿಗೆ ಆಗ್ರಹಿಸಿದರು. ಆದರೆ ಪ್ರಭು ನಾರಾ ಅವರು ಕಾರು ಕೀ ನೀಡದೇ ಕೆಲ ಹೊತ್ತು ಅಧಿಕಾರಿಗಳನ್ನ ಕಾಯಿಸಿ, ಹೈಡ್ರಾಮಾ ಸೃಷ್ಟಿಸಿದರು. ನಂತರ ಕಾರಿನಲ್ಲಿದ್ದ ಬಂಡಲ್ಗಳನ್ನ ಓಪನ್ ಮಾಡಿಸುವಂತೆ ಕೆಲ ಕಾರ್ಯಕರ್ತರು ಅಧಿಕಾರಿಗಳ ಎದುರೇ ಪ್ರತಿಭಟನೆ ನಡೆಸಿದಾಗ, ಕಾರ್ ಡೋರ್ ಓಪನ್ ಮಾಡಿಸಲಾಯಿತು. ಈ ವೇಳೆ ಕಾರಿನಲ್ಲಿದ್ದ ಟೀ ಶರ್ಟ್ ಮೇಲೆ ‘4’ ಸಂಖ್ಯೆ ಇರುವುದು ಬೆಳಕಿಗೆ ಬಂತು. ಇದನ್ನೂ ಓದಿ: ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರಿಕೆ ಬಿಡುಗಡೆ
ಬಿಜೆಪಿ ಅಭ್ಯರ್ಥಿ (BJP Candidate) ವೀರಣ್ಣ ಚರಂತಿಮಠ ಅವರ ಕ್ರಮಸಂಖ್ಯೆ ಸಹ ‘4’ ಆಗಿರೋದ್ರಿಂದ, ಮತದಾರರಿಗೆ ಆಮಿಷ ಒಡ್ಡಲು ಟೀ ಶರ್ಟ್ ನೀಡಲು ಮುಂದಾಗಿದ್ದಾರೆಂದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಟೀ ಶರ್ಟ್ ಬಂಡಲ್ ಗಳು ಇದ್ದ ಕಾರನ್ನು ಜಪ್ತಿ ಮಾಡಿದ ಅಧಿಕಾರಿಗಳು. ನಂತರ ನಾರಾ ಅವರ ಗೋದಾಮು ಪರಿಶೀಲಿಸಿದ್ರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಾಗಿದ್ರೆ, ಅವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂಬ ಭರವಸೆ ನೀಡಿದರು.
ಇತ್ತ ಗೋದಾಮಿನ ಮಾಲೀಕ ಪ್ರಭು ನಾರಾ, ಈ ಟೀ ಶರ್ಟ್ ಗಳಿಗೂ ಹಾಗೂ ಚುನಾವಣೆಗೂ ಸಂಬಂಧ ಇಲ್ಲ, ಯಾವುದೇ ಪಕ್ಷದ ಚಿನ್ಹೆ ಇಲ್ಲ, ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲು ಟೀ ಶರ್ಟ್ ತರಿಸಲಾಗಿದೆ. ಇದರ ಎಲ್ಲಾ ಬಿಲ್ಗಳು ನಮ್ಮ ಬಳಿ ಇವೆ. ನಾಳೆ ಬೆಳಗ್ಗೆ ಅಧಿಕಾರಿಗಳಿಗೆ ಬಿಲ್ ತೋರಿಸುವುದಾಗಿ ಹೇಳಿದರು. ಕೆಲ ಹೊತ್ತು ಬಸವೇಶ್ವರ ಸರ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಅಲ್ಲಿದ್ದ ಜನರನ್ನು ಚದುರಿಸಿ, ಟೀ ಶರ್ಟ್ ಬಂಡಲ್ ಇದ್ದ ಕಾರನ್ನು ಸೀಜ್ ಮಾಡಿ ಪೊಲೀಸ್ ಠಾಣೆಗೆ ಒಯ್ದರು.