ಮಂಗಳೂರು: ಸಚಿವ ಸುನಿಲ್ ಕುಮಾರ್ (Sunil Kumar) ಅವರು ನವೆಂಬರ್ ಅಂತ್ಯಕ್ಕೆ ಸುರತ್ಕಲ್ ಟೋಲ್ ಗೇಟ್ (Surathkal Tollgate) ತೆರವುಗೊಳಿಸುವುದಾಗಿ ಹೇಳಿಕೆ ನೀಡುವ ಮೂಲಕ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi) ಜಿಲ್ಲೆಯ ಜನತೆಗೆ ಮತ್ತೊಂದು ಆಘಾತ ನೀಡಿದ್ದಾರೆ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) 20 ದಿನಗಳ ಕಾಲಾವಧಿ ನೀಡುವಂತೆ ಹೇಳಿಕೆ ನೀಡಿದ್ದರು. ಆದರೆ ಇದೀಗ ಈವರೆಗೆ ಟೋಲ್ ಸುಲಿಗೆಯ ಕುರಿತು ಒಂದು ಶಬ್ದವನ್ನೂ ಮಾತಾಡದಿರುವ ಸಚಿವ ಸುನಿಲ್ ಕುಮಾರ್ ಅವರು, ಈಗ 40 ದಿನಗಳ ಕಾಲಾವಧಿಯ ಹೇಳಿಕೆಯೊಂದಿಗೆ ಹೊಸ ವರಸೆ ಆರಂಭಿಸಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ವಾಗ್ದಾಳಿ ನಡೆಸಿದರು.
ಈ ರೀತಿಯ ಕಾಲಮಿತಿಗಳು 6 ವರ್ಷಗಳಿಂದ ಹಲವು ಬಾರಿ ಪುನರಾವರ್ತನೆಗೊಂಡಿದೆ. ತುಳುನಾಡಿನ ಜನತೆ ಇಂತಹ ಹೇಳಿಕೆಗಳ ಕುರಿತು ಯಾವುದೇ ನಂಬಿಕೆ ಹೊಂದಿಲ್ಲ. ಅ. 17ರಂದು 20 ದಿನಗಳ ಕಾಲಾವಧಿ ಕೊಡುವಂತೆ ಸಂಸದ ನಳಿನ್ ಕುಮಾರ್ ಹೇಳಿಕೆ ನೀಡಿದ್ದಾಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಎಲ್ಲಿದ್ದರು? ಟೋಲ್ ಗೇಟ್ ಮುತ್ತಿಗೆ ಸಂದರ್ಭ ಇಡೀ ತುಳುನಾಡು ಒಂದಾಗಿ ಟೋಲ್ ಗೇಟ್ ಮುಚ್ಚಲು ಆಗ್ರಹಿಸುತ್ತಿದ್ದಾಗ ಉಸ್ತುವಾರಿ ಸಚಿವರ ಜವಾಬ್ದಾರಿ ಮರೆತು ಕಾಣೆಯಾಗಿದ್ದ ಸುನಿಲ್ ಕುಮಾರ್ ಈಗ ದಿನ ಮುಂದೂಡುವ ಹೊಸ ಆಟದೊಂದಿಗೆ ರಂಗಕ್ಕಿಳಿದಿರುವುದರ ಮರ್ಮ ಸಣ್ಣ ಮಕ್ಕಳಿಗೂ ಅರ್ಥವಾಗುತ್ತದೆ. ಬಿಜೆಪಿ ಸಂಸದ, ಶಾಸಕರು ಇಂತಹ ಸುಳ್ಳುಗಳನ್ನು ನಂಬುವವರು ಈ ಜಿಲ್ಲೆಗಳಲ್ಲಿ ಈಗ ಯಾರೂ ಇಲ್ಲ ಎಂದು ಹೋರಾಟ ಸಮಿತಿ ತಿರುಗೇಟು ನೀಡಿದೆ. ಇದನ್ನೂ ಓದಿ: ಕಪಾಳಮೋಕ್ಷ ಪ್ರಕರಣಕ್ಕೆ ಟ್ವಿಸ್ಟ್- ಸಚಿವರು ನಂಗೆ ಹೊಡೆದಿಲ್ಲವೆಂದು ಮಹಿಳೆ ಸ್ಪಷ್ಟನೆ
ಹೋರಾಟವನ್ನು ಕೈ ಬಿಟ್ಟರೆ ಟೋಲ್ ತೆರವು ಪ್ರಸ್ತಾಪವನ್ನೇ ಬಿಜೆಪಿ ಸರ್ಕಾರ ಕೈ ಬಿಡುತ್ತದೆ. ಜನತೆಯ ಒಗ್ಗಟ್ಟಿನ ಹೋರಾಟ ಮಾತ್ರ ಸುರತ್ಕಲ್ ಟೋಲ್ ಗೇಟ್ ಅನ್ನು ತೆರವುಗೊಳಿಸಬಲ್ಲದು. ಬಿಜೆಪಿ ಸಂಸದ, ಶಾಸಕರನ್ನು ನಂಬಿದರೆ ಟೋಲ್ ಸುಲಿಗೆ ಶಾಶ್ವತವಾಗಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮಾತುಕೊಟ್ಟಂತೆ ಕಾಲಮಿತಿಯಲ್ಲಿ ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿ ಅಕ್ಟೋಬರ್ 28 ರಿಂದ ನಡೆಯಲಿರುವ ಹಗಲು ರಾತ್ರಿ ಸಾಮೂಹಿಕ ಧರಣಿಯನ್ನು ಜನತೆ ವ್ಯಾಪಕವಾಗಿ ಬೆಂಬಲಿಸುವ ಮೂಲಕ ಟೋಲ್ ಗೇಟ್ ತೆರವು ಹೋರಾಟಕ್ಕೆ ಬಲ ತುಂಬಬೇಕು ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮುಕ್ತಾಯ