ಬೆಂಗಳೂರು: ಮಕ್ಕಳಿಗೆ ಜ್ಞಾನ ವಿಕಾಸ, ಮನೋವೈಜ್ಞಾನಿಕ ಬೆಳೆಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಬೇಕು. ಅವರ ಬಗ್ಗೆ ಸ್ಪೂರ್ತಿ ಬೆಳೆಸುವ ಕೆಲಸ ಆಗಬೇಕು. ಅದೆಲ್ಲಾ ಬಿಟ್ಟು ಹೆಗ್ಡೆವಾರ್ ಭಾಷಣ ಯಾರಿಗಾಗಿ ಸೇರ್ಪಡೆ ಮಾಡಿದ್ದು? ಸರ್ಕಾರ ಮೊಂಡಾಟ ಮಾಡಿದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಸರ್ಕಾರದ ವಿರುದ್ಧ ಮಾತನಾಡಿದ ಸಿದ್ದರಾಮಯ್ಯ, ಅಂಬೇಡ್ಕರ್ ಬಗ್ಗೆ ಸಂವಿಧಾನ ಶಿಲ್ಪಿ ಎಂಬ ಸಾಲನ್ನೇ ತೆಗೆದಿದ್ದಾರೆ. ನನ್ನ ಪ್ರಕಾರ ಪರಿಷ್ಕರಣೆ ಮಾಡಿರುವುದನ್ನು ಕೈ ಬಿಟ್ಟು, ಹಳೆಯದ್ದನೇ ಮುಂದುವರಿಸಬೇಕು. ಅಗತ್ಯವಿದ್ದರೆ ಹೊಸ ಕಮಿಟಿ ಮಾಡಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಸವರಾಜ ಹೊರಟ್ಟಿ ಬಗ್ಗೆ ಪಿಹೆಚ್ಡಿ ಮಾಡಬೇಕು: ಬೊಮ್ಮಾಯಿ
ಬುದ್ಧಿ ಭ್ರಮಣೆ ಆಗಿದೆ ಎಂಬ ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಕೋಮುವಾದಿ ನಶೆ ತಲೆಗೆ ಹತ್ತಿದೆ. ಅದರಿಂದ ಅವರು ಹೊರ ಬರಬೇಕು. ಸಂವಿಧಾನ ವಿರುದ್ಧವಾಗಿದ್ದವರಿಗೆ ಅಧಿಕಾರ ಕೊಟ್ಟಿರುವುದೇ ತಪ್ಪು ಎಂದರು.
ಸಿದ್ದರಾಮಯ್ಯ ಹುಚ್ಚ ಎಂದು ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಈಶ್ವರಪ್ಪ ಯಾಕೆ ಮಂತ್ರಿ ಸ್ಥಾನ ಕಳೆದುಕೊಂಡಿದ್ದು? ಅವರು ಭ್ರಷ್ಟಾಚಾರ ಮಾಡಿ ಸ್ಥಾನ ಕಳೆದುಕೊಂಡಿರುವುದು. ಅವರಿಂದ ನಾನು ಪಾಠ ಕಲಿಯಬೇಕಾ? ಎಂದು ಟೀಕಿಸಿದರು. ಇದನ್ನೂ ಓದಿ: ಪರಿಷ್ಕೃತ ಪಠ್ಯದಿಂದ ಹಿಂದೂಗಳಿಗೆ ಮಾತ್ರವಲ್ಲ, ಆರೂವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ: ಸಿದ್ದರಾಮಯ್ಯ
ಚಡ್ಡಿ ಸುಡುವ ಅಭಿಯಾನದ ಬಗ್ಗೆ ಬಿಜೆಪಿ ಕಟುವಾಗಿ ಟೀಕಿಸುತ್ತಿರುವ ಬಗ್ಗೆ ನುಡಿದ ಸಿದ್ದರಾಮಯ್ಯ, ಅವರು ಟೀಕೆ ಮಾಡಿಯೇ ಮಾಡುತ್ತಾರೆ. ಟೀಕೆ ಮಾಡದೇ ಇನ್ನೇನು ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.