ಸಮ್ಮಿಶ್ರ ಸರ್ಕಾರದಲ್ಲಿ ಸ್ವಾಭಿಮಾನ ಅಡ್ಡಿಬರಲಿಲ್ಲವೇ: ಹೆಚ್‌ಡಿಕೆಗೆ ರೇಣುಕಾಚಾರ್ಯ ಪ್ರಶ್ನೆ

Public TV
2 Min Read
RENUKACHARYA

ದಾವಣಗೆರೆ: ಎಷ್ಟೇ ಆದರೂ ನೀವು ಸಾಂದರ್ಭಿಕ ಶಿಶು ತಾನೇ? ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೇವಲ ಗುಲಾಮನಾಗಿದ್ದೆ ಎಂದು ಹೇಳುವಾಗ ನಿಮಗೆ ಸ್ವಾಭಿಮಾನ ಅಡ್ಡಿಬರಲಿಲ್ಲ? ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಹಿಂದೂ ಪರ ಸಂಘಟನೆಗಳ ವಿರುದ್ಧ ಕುಮಾರಸ್ವಾಮಿ ಧ್ವನಿ ಎತ್ತಿದ್ದ ಬೆನ್ನಲ್ಲೇ ಶಾಸಕ ರೇಣುಕಾಚಾರ್ಯ ಸರಣಿ ಟ್ವೀಟ್ ಮೂಲಕ ಕುಟುಕಿದ್ದಾರೆ. ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯಲ್ಲಾದರೂ ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನದವರು ಯಾರು ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿರುವ ಜನರಿಗೆ ಸರ್ಕಾರದಿಂದ ಕರೆಂಟ್ ಶಾಕ್: ಪೃಥ್ವಿ ರೆಡ್ಡಿ

ಅಧಿಕಾರ ಹಸ್ತಾಂತರ ಮಾಡುವಾಗ ಒಪ್ಪಂದದ ನಾಟಕವಾಡಿದ ವಚನ ಭ್ರಷ್ಟ ಯಾರು? ನನ್ನಿಂದಲೇ ಕರ್ನಾಟಕದಲ್ಲಿ ಬಿಜೆಪಿ ಮರುಜನ್ಮ ಪಡೆಯಿತು ಎಂದು ಹೇಳುವ ನಿಮಗೆ ಕೃತಜ್ಞತೆ ಇದೆಯೆ? 2006ರಲ್ಲಿ ನಾವು ಜೆಡಿಎಸ್‌ಗೆ ಬೆಂಬಲ ನೀಡಿ ಸರ್ಕಾರ ರಚಿಸದಿದ್ದರೆ ಅಂದೇ ನಿಮ್ಮ ಪಕ್ಷ ಹೇಳ ಹೆಸರಿಲ್ಲದಂತೆ ಮುಗಿಸಲು ಇಬ್ಬರು ಮಹಾನ್ ನಾಯಕರು ಮುಂದಾಗಿದ್ದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಸಂಘಟನೆಗಳ ವಿರುದ್ಧ ಏಕಾಏಕಿ ಮುಗಿಬಿದ್ದಿರುವುದರ ಹಿಂದೆ ನಿಜವಾದ ಜನಹಿತ ಇದ್ದರೆ, ಗಂಗೊಳ್ಳಿಯಲ್ಲಿ ಮೀನು ಖರೀದಿಸಬಾರದೆಂದು ಹುಕುಂ ಹೊರಡಿಸಿದವರ ವಿರುದ್ಧ ಏಕೆ ಸೊಲ್ಲೆತ್ತಿಲ್ಲ? ಕೇವಲ ಹಿಂದೂಗಳು, ಹಿಂದೂ ಸಂಘಟನೆಗಳು ನಿಮ್ಮ ಕಣ್ಣಿಗೆ ಸಮಾಜ ಘಾತುಕರಂತೆ ಕಂಡರೆ ಶಿವಮೊಗ್ಗದಲ್ಲಿ ಅಮಾಯಕ ಹರ್ಷ ಕೊಲೆ ಮಾಡಿದವರು ಯಾರು, ಶಾಂತಿಪ್ರೀಯರೇ? ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನನ್ನು ಈ ಬಾರಿ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ: ರೇಣುಕಾಚಾರ್ಯ

ಬಿಜೆಪಿ ಶ್ರೀಮಂತ ಪಕ್ಷ ಎನ್ನುವುದಾದರೆ ನೀವು ರಾಮನಗರದಲ್ಲಿ ರೇಷ್ಮೆ, ಹಾಸನದಲ್ಲಿ ಆಲೂಗಡ್ಡೆ ಬೆಳೆದು ಪಕ್ಷ ಸಂಘಟನೆ ಮಾಡುತ್ತಿದ್ದಿರಾ? ತಾಜ್ ವೆಸ್ಟ್ ಆಂಡ್ ಹೋಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ ನೀವು ಅಧಿಕಾರ ಇದ್ದಾಗ ಜನರ ಕೈಗೆ ಸಿಗದೇ ಈಗ ಬಡವರ ಬಗ್ಗೆ ಅಣಿಮುತ್ತು ಉದುರಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದು ಸರಣಿ ಟ್ವೀಟ್ ಮುಖಾಂತರ ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *