ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನೇತೃತ್ವದ ʻಮಾಫಿಯಾʼ ಹಿಡಿತದಲ್ಲಿ ಬಂಗಾಳವಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಬಿಜೆಪಿ ಸತ್ಯಶೋಧನಾ ತಂಡ ಆರೋಪಿಸಿದೆ.
ಬಿರ್ಭೂಮ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸತ್ಯಶೋಧನಾ ಸಮಿತಿ ತನ್ನ ತನಿಖಾ ವರದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದೆ. ಸುಲಿಗೆ, ಗೂಂಡಾ ತೆರಿಗೆ ಸೇರಿದಂತೆ ಇತರೆ ಕೃತ್ಯಗಳು ಹತ್ಯೆಗಳಿಗೆ ಕಾರಣವಾಗಿವೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಕಾಶ್ಮೀರ ಹತ್ಯಾಕಾಂಡ – 31 ವರ್ಷದ ಬಳಿಕ ಪಾತಕಿ ಬಿಟ್ಟಾ ಕರಾಟೆ ವಿರುದ್ಧ ಅರ್ಜಿ ಸಲ್ಲಿಕೆ
ಸ್ಥಳೀಯ ನಿವಾಸಿಗಳು ತಮ್ಮ ಜೀವ ಮತ್ತು ಆಸ್ತಿ ಬೆದರಿಕೆಯ ಭಯದಿಂದ ಮನೆಗಳನ್ನು ತೊರೆದಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದಂತಹ ಸಂಸ್ಥೆಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಮರಳಿ ಕರೆತರಲು ಆತ್ಮವಿಶ್ವಾಸವನ್ನು ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತೃಣಮೂಲ ಕಾಂಗ್ರೆಸ್ನ ಸ್ಥಳೀಯ ನಾಯಕ ಭಾದು ಶೇಖ್, ಬಾಂಬ್ ದಾಳಿಯಲ್ಲಿ ಹತನಾದ ನಂತರ ಪ್ರತಿಕಾರವಾಗಿ ರಾಮ್ಪುರಹಾತ್ ಪಟ್ಟಣದ ಬಳಿಯ ಭಿರ್ಭೂಮ್ನಲ್ಲಿ ಮಾರ್ಚ್ 22 ರಂದು ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಸಜೀವ ದಹನ ಮಾಡಲಾಯಿತು. ಒಂದು ದಿನದ ನಂತರ ಸುಟ್ಟ ಮೃತದೇಹಗಳು ಪತ್ತೆಯಾಗಿದೆ. ಮೃತರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಯತ್ನ – ಎಎಪಿ ಆರೋಪ
ಬಿಜೆಪಿ ತಂಡ ಈಗಾಗಲೇ ಕೋಲ್ಕತ್ತಾ ತಲುಪಿದ ನಂತರ ಗ್ರಾಮಕ್ಕೆ ಭೇಟಿ ನೀಡಲು ಮಮತಾ ಬ್ಯಾನರ್ಜಿ ನಿರ್ಧರಿಸಿದ್ದರು ಎಂದು ಬಿಜೆಪಿ ತಂಡ ಹೇಳಿದೆ. ಮುಖ್ಯಮಂತ್ರಿ ಭೇಟಿಯಿಂದಾಗಿ ತೃಣಮೂಲ ಕಾಂಗ್ರೆಸ್ನ ಗೂಂಡಾಗಳು ಬಿಜೆಪಿ ಸತ್ಯಶೋಧನಾ ತಂಡದ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ಗಂಭೀರ ಆರೋಪ ಮಾಡಿದೆ.
ಒಬ್ಬ ಅಧಿಕಾರಿ ಅಥವಾ ಕಾನ್ಸ್ಟೇಬಲ್ ಕೂಡ ಕಾಣಿಸಲಿಲ್ಲ. ಸತ್ಯಶೋಧನಾ ತಂಡ ದಾಳಿಗೆ ಒಳಗಾದಾಗ ಯಾರೂ ರಕ್ಷಣೆಗೆ ಬಂದಿಲ್ಲ. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನಗಳೂ ವಿಫಲವಾಗಿದ್ದವು ಎಂದು ವರದಿ ತಿಳಿಸಿದೆ.
ಬಿಜೆಪಿ ತಂಡದ ವರದಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖಂಡಿಸಿದ್ದಾರೆ. ಇಂತಹ ವರದಿಗಳು ತನಿಖೆಗೆ ಅಡ್ಡಿಪಡಿಸುತ್ತವೆ. ಅಲ್ಲದೇ ತನಿಖೆಯ ದಿಕ್ಕು ತಪ್ಪಿಸುತ್ತವೆ ಎಂದು ಆರೋಪಿಸಿದ್ದಾರೆ.
ಇವುಗಳು ರಾಜಕೀಯ ಪ್ರೇರಿತ ವರದಿಗಳು. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಈ ಧೋರಣೆಯನ್ನು ನಾನು ಖಂಡಿಸುತ್ತೇನೆ. ತನಿಖೆ ನಡೆಯುತ್ತಿರುವಾಗ ಯಾವುದೇ ಪಕ್ಷ ಹಸ್ತಕ್ಷೇಪ ಮಾಡಬಾರದು. ಇದು ಸಂಪೂರ್ಣ ಅಧಿಕಾರದ ದುರುಪಯೋಗವಾಗಿದೆ. ಇದು ಸೇಡು ಮತ್ತು ಪಕ್ಷಪಾತವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯೇತರ ಪ್ರತಿಪಕ್ಷಗಳ ಆಧಾರ ಸ್ತಂಭ ಮಮತಾ ಬ್ಯಾನರ್ಜಿ: ಕಾಂಗ್ರೆಸ್ ಸಂಸದ ಬಣ್ಣನೆ