ಬೆಂಗಳೂರು: 2024 ಚುನಾವಣೆ ನಮ್ಮ ಮುಂದೆ ಇದೆ. ಅಂತೆಯೇ ಜವಾಬ್ದಾರಿಯೂ ಬಹಳಷ್ಟಿದೆ. ಈಗ ಕರ್ನಾಟಕವನ್ನು 2023ರಲ್ಲಿ ಮತ್ತೊಮ್ಮೆ ಭಾಜಪದ ಕಮಲವನ್ನು ಅರಳಿಸುವ ಸಮಯ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಅವರು ಇಂದು ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ ವಿಜಯೋತ್ಸವ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಲಿದೆ. ಇನ್ನಷ್ಟು ಚುರುಕಾಗಿ ಜಾಗೃತವಾಗಿ ಮತದಾರರ ಬಳಿಗೆ ಹೋಗಿ ಬಜೆಟ್ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಿದೆ. ಅಧಿಕಾರಿಗಳಿಗೆ ನಾನು ಈಗಾಗಲೇ ಸೂಚನೆಯನ್ನು ನೀಡಿದ್ದೇನೆ. ಈ ತಿಂಗಳಿನೊಳಗೆ ಕಡತಗಳು ಸಿದ್ಧವಾಗಬೇಕು. ಏಪ್ರಿಲ್ ತಿಂಗಳ ಒಳಗೆ ಬಜೆಟ್ನಲ್ಲಿ ಏನೇನು ಕಾರ್ಯಕ್ರಮಗಳನ್ನು ಇಲಾಖೆಗಳಿಗೆ ಕೊಟ್ಟಿದ್ದೇವೆ ಅವೆಲ್ಲವುಗಳಿಗೆ ಕಾರ್ಯಾದೇಶ ಆಗಬೇಕು ಎಂದು ಸೂಚಿಸಲಾಗಿದೆ. ಕೂಡಲೇ ಎಲ್ಲಾ ಯೋಜನೆಗಳನ್ನು ಪ್ರಾರಂಭಿಸಿ, ಅನುಷ್ಠಾನಗೊಳಿಸುತ್ತೇವೆ. ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ
ರಾಜ್ಯ ಪ್ರವಾಸ: ಯೋಜನೆಗಳ ಪ್ರಚಾರವನ್ನೂ ಬೂತ್ ಮಟ್ಟದಿಂದ ಕಾರ್ಯಕರ್ತರು ಮಾಡಬೇಕು. ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು. ಭಾಜಪದ ಸದೃಢ ಸಂಘಟನೆ ಮತ್ತು ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳು ಮುಂದಿನ ಚುನಾವಣೆಯಲ್ಲಿ ಬಳಕೆ ಮಾಡಿ ಜನರ ಹೃದಯವನ್ನು ಗೆದ್ದು 2023ರ ಚುನಾವಣೆಯಲ್ಲಿ ಭಾಜಪದ ಕಮಲವನ್ನು ಅರಳಿಸಿ, ಮುಂದಿನ 5 ವರ್ಷ ಸುಭಿಕ್ಷವಾದ ನಾಡನ್ನು ಕಟ್ಟುವ ಸಂಕಲ್ಪವನ್ನು, ಪಣವನ್ನು ತೊಟ್ಟಿದ್ದೇವೆ. ಇದನ್ನೂ ಓದಿ: 12 ಸಾವಿರ ರಷ್ಯಾ ಸೈನಿಕರ ಸಾವು – 20 ಲಕ್ಷ ಉಕ್ರೇನಿಯನ್ನರು ಪಲಾಯನ
ಅಧಿವೇಶನ ಮುಗಿದ ಕೂಡಲೇ ನಮ್ಮ ನಾಯಕರಾದ ಯಡಿಯೂರಪ್ಪನವರ ಸಮೇತ, ಕೇಂದ್ರದ ನಾಯಕರ ಜೊತೆ ಇಡೀ ರಾಜ್ಯವನ್ನು ಸುತ್ತಿ ಭಾಜಪದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಹೊಸ ಹೊಸ ಕ್ಷೇತ್ರಗಳಲ್ಲಿ ಭಾಜಪವನ್ನು ಆರಿಸುವವರೆಗೂ ಬಿಡುವುದಿಲ್ಲ. ಈಗಾಗಲೇ ಕಾರ್ಯಪ್ರವೃತ್ತವಾಗಿದ್ದೇವೆ. ಅದಕ್ಕಾಗಿ ಸರ್ಕಾರದ ವತಿಯಿಂದ ಎಲ್ಲಾ ಜನಪರವಾದ ಕಾರ್ಯಕ್ರಮಗಳನ್ನು ಮಾಡಲು ನಾವು ಸನ್ನದ್ಧರಾಗಿದ್ದೇವೆ. ಪಕ್ಷದ ಕಾರ್ಯಕರ್ತರು ಕೂಡ ಪಕ್ಷದ ಸಂಘಟನೆ, ಬಲಪಡಿಸುವುದು, ಭಾಜಪವನ್ನು ಅಧಿಕಾರಕ್ಕೆ ತರಲು ಎಲ್ಲಾ ಕಾರ್ಯಕ್ರಮಗಳಿಗೆ ಶಕ್ತಿ ತುಂಬಲು ಸನ್ನದ್ಧರಾಗಬೇಕೆಂದು ಕರೆ ನೀಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗಲಿದೆ: ದೇಶದಲ್ಲಿ ಕಾಂಗ್ರೆಸ್ ಮುಳುಗಿಹೋಗಿದೆ. ಮುಂದೆ ಕರ್ನಾಟಕದಲ್ಲಿಯೂ ಮುಳುಗಲಿದೆ. ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ, ರಾಷ್ಟ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ದಿಕ್ಕು ತೋಚದ, ದಿಕ್ಕಾಪಾಲಾಗಿರುವ ಧೂಳೀಪಟವಾಗಿರುವ ಪಕ್ಷ. ಇಡೀ ರಾಷ್ಟ್ರದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಭಾಜಪ ದೇಶದ ಭವಿಷ್ಯಕ್ಕಾಗಿ ಹೋರಾಟ ಮತ್ತು ಕೆಲಸವನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್ನವರು ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಾರೆ. ಇದು ವ್ಯತ್ಯಾಸ. ನಾಲ್ಕು ರಾಜ್ಯಗಳಲ್ಲಿ ವಿಜಯ ಗಳಿಸಿದೆ. ಮಂದೆ ಗುಜರಾತ್, ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಕರ್ನಾಟಕದಲಿ ಭಾಜಪ ಹುಟ್ಟುವುದು ಅಷ್ಟೇ ಸತ್ಯ ಎಂದರು.
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರ ನೋಂದಣಿ ಮಾಡಿಸುವವರಿಗೆ ಫ್ರಿಡ್ಜ್, ಟಿವಿಯನ್ನು ಸಿದ್ಧರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ನೀಡಲಾಗಿದೆ. ಕಾಂಗ್ರೆಸ್ನವರಿಗೆ ತೆಗೆದುಕೊಳ್ಳುವುದು ಕೊಡುವುದು ಕರಗತವಾಗಿರುವಂಥದ್ದು. ಯಾವ ಕೆಲಸವೂ ಆಗುವುದಿಲ್ಲ. ಈಗೇನು ಕೊಡುತ್ತಾರೋ, ಅದಕ್ಕೆ ಹತ್ತುಪಟ್ಟು ಅಧಿಕಾರಕ್ಕೆ ಬಂದ ನಂತರ ತೆಗೆದುಕೊಳ್ಳುತ್ತಾರೆ. ಈ ದುಸ್ಥಿತಿಯಲ್ಲಿ ಅವರಿದ್ದಾರೆ. ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದೇ, ಬೇಜಾವಾಬ್ದಾರಿಯಿಂದ ಬೇಕಾದ್ದನ್ನು ಹೇಳಿದ್ದರು. ನಮ್ಮ ಕಾಂಗ್ರೆಸ್ ನಾಯಕರು ಸರ್ಕಾರ ಮಾಡಲು ಗೋವಾಕ್ಕೆ ತೆರಳಿದ್ದಾರೆ. ಪರಿಸ್ಥಿತಿ ಬೇರೆನೇ ಆಗಿದೆ. ಅವರ ಕಾಲ್ಗುಣ ಸರಿಯಿಲ್ಲ ಎಂದರು.