ಚಿಕ್ಕಮಗಳೂರು: ನಗರದ ಖಾಲಿ ಸೈಟು, ಲೈಟ್ ಕಂಬ, ರಸ್ತೆಯ ತಿರುವುಗಳಲ್ಲಿ ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನ ಪತ್ತೆ ಹಚ್ಚಿದ ಯುವಕರು, ಅವರ ಕೈಯಿಂದಲೇ ಕಸವನ್ನ ತುಂಬಿಸಿರೋ ಘಟನೆ ನಗರದಲ್ಲಿ ನಡೆದಿದೆ.
ನಗರದ 26ನೇ ವಾರ್ಡಿನಲ್ಲಿ ರಾತ್ರಿ ಸರಿ ಇದ್ದ ಏರಿಯಾದ ರಸ್ತೆ ಬದಿಗಳಲ್ಲಿ ಬೆಳಗಾಗುವುದರಲ್ಲಿ ಕಸ ತುಂಬಿರುತ್ತಿತ್ತು. ಯಾರು, ಯಾವಾಗ ಹಾಕುತ್ತಾರೆಂದು ಸ್ಥಳೀಯರು ತಲೆಕೆಡಿಸಿಕೊಂಡಿದ್ದರು. ಇದರಿಂದ ಕೆಟ್ಟ ವಾಸನೆ ಕೂಡ ಬರುತ್ತಿತ್ತು. ನಗರದ ಸೌಂದರ್ಯವೂ ಹಾಳಾಗಿತ್ತು. ಅದಕ್ಕಾಗಿ ನಗರದ ನಾಲ್ಕೈದು ಹುಡುಗರು ಮಧ್ಯರಾತ್ರಿವರೆಗೂ ಕಾದು ಕೂತು ಕಸ ಹಾಕುವವರನ್ನ ಪತ್ತೆ ಹಚ್ಚಿದ್ದಾರೆ. ಅಷ್ಟೆ ಅಲ್ಲದೆ ಕಸ ಹಾಕಿದವರ ಕೈಯಿಂದಲೇ ಮಧ್ಯರಾತ್ರಿಯೇ ಕಸವನ್ನ ಬಾಚಿಸಿ ನಾಳೆ ಬೆಳಗ್ಗೆ ಕಸದ ಗಾಡಿಯಲ್ಲಿ ಹಾಕುವಂತೆ ಸೂಚಿಸಿದ್ದಾರೆ.
ರಾತ್ರಿ ಇಲ್ಲಿ ಕಸ ತಂದು ಸುರಿಯುವ ಬದಲು ಬೆಳಗ್ಗೆ ಬೇಗ ಎದ್ದು ಪ್ರತಿದಿನ ಬರುವ ಕಸದ ಗಾಡಿಯಲ್ಲಿ ಕಸವನ್ನ ಹಾಕುವಂತೆ ಸೂಚಿಸಿದ್ದಾರೆ. ಇನ್ನು ಮುಂದೆ ಹೀಗೆ ರಸ್ತೆ ಬದಿ ಕಸ ಸುರಿಯುವುದು ಕಂಡು ಬಂದರೆ ಕಸವನ್ನ ತುಂಬಿಕೊಂಡು ಬಂದು ನಿಮ್ಮ ಮನೆಯ ಆವರಣದಲ್ಲಿ ಸುರಿಯೋದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಆಸ್ತಿಗಾಗಿ ಬದುಕಿದ್ದ ಅಜ್ಜಿಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು – ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿ!
ಇತ್ತೀಚೆಗೆ ನಗರದ ಮಲ್ಲಂದೂರು ರಸ್ತೆಯಲ್ಲಿ ಉಪ್ಪಳ್ಳಿಗೆ ಹೋಗುವ ಮಾರ್ಗದಲ್ಲಿ ಹಾಡಹಗಲೇ ಯುವಕನೋರ್ವ ಉಪ್ಪಳ್ಳಿ ಚಿತಾಗಾರ ಸಮೀಪದ ಯಗಚಿ ನದಿಗೆ ಸೇರುವ ಹಳ್ಳಕ್ಕೆ ಬೈಕಿನಲ್ಲಿ ಕೂತು ಕಸ ಎಸೆದು ಹೋಗುತ್ತಿದ್ದನು. ಇದನ್ನ ಗಮನಿಸಿದ ಶಾಸಕ ಸಿ.ಟಿ.ರವಿ ಕಾರಿನಿಂದ ಕೆಳಗೆ ಇಳಿದು ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಹಳ್ಳದ ನೀರು ಯಗಚಿ ಜಲಾಶಯಕ್ಕೆ ಸೇರಲಿದೆ. ಮನೆ ಬಾಗಿಲಿಗೆ ಕಸದ ಗಾಡಿ ಬರಲಿದೆ. ಇಲ್ಲಿ ಏಕೆ ತಂದು ಹಾಕುತ್ತಿದ್ದೀಯಾ ಎಂದು ಯುವಕನಿಗೆ ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡಿದ್ದರು.
ನಗರದ ಕಲ್ಯಾಣ ನಗರದ ಬಳಿಯೂ ಯುವಕ ರಸ್ತೆಗೆ ಕಸ ಸುರಿದ ಹೋಗುವುದನ್ನ ಗಮನಿಸಿದ ನಗರಸಭೆ ಆಯುಕ್ತ ಬಸವರಾಜ್ ಅವನ ಕೈನಲ್ಲೇ ಕಸ ತುಂಬಿಸಿ, ಇನ್ನು ಮುಂದೆ ಹೀಗೆ ರಸ್ತೆಯಲ್ಲಿ ಎಸೆದರೆ ಮನೆಗೆ ನೀಡಿರುವ ಮೂಲಭೂತ ಸೌಲಭ್ಯಗಳನ್ನ ಕಟ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.