ಪಾಟ್ನ: ನ್ಯಾಯಾಧೀಶರ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿರುವ ಘಟನೆ ಬಿಹಾರ್ನಲ್ಲಿ ನಡೆದಿದೆ. ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸಲಾಗಿದೆ.
ನ್ಯಾಯಾಲಯದ ಕೊಠಡಿಗೆ ಏಕಾಏಕಿ ನುಗ್ಗಿದ ಪೊಲೀಸ್ ಅಧಿಕಾರಿಗಳು ಮಧುಬಾನಿ ಜಿಲ್ಲೆಯ ಜಂಝರ್ಪುರ್ನ ಎಡಿಜೆ ಅವಿನಾಶ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಗನ್ ಅನ್ನು ತೋರಿಸಿ ಎದುರಿಸಿದ್ದಾರೆ ಎನ್ನಲಾಗಿದೆ.
ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ ಠಾಣೆಯ ವಸತಿ ಅಧಿಕಾರಿ ಗೋಪಾಲ್ ಪ್ರಸಾದ್, ಸಬ್ ಇನ್ಸ್ಪೆಕ್ಟರ್ ಅಭಿಮನ್ಯು ಕುಮಾರ್ ಅವರನ್ನು ಘೋಘ್ರಾದ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಹಲ್ಲೆ ವೇಳೆ ಸ್ಥಳದಲ್ಲಿದ್ದ ವಕೀಲರು, ಕೋರ್ಟ್ ಸಿಬ್ಬಂದಿ ನ್ಯಾಯಾಧೀಶರ ರಕ್ಷಣೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನ್ಯಾಯಾಧೀಶರು ಸದ್ಯ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬ್ಯಾಂಕಿನಲ್ಲಿ 15 ಕೋಟಿ ಇಟ್ಟಿದ್ರೆ ಎಂಎಲ್ಸಿ ಚುನಾವಣೆಗೆ ಟಿಕೆಟ್ ಸಿಗುತ್ತಂತೆ: ಎಚ್.ವಿಶ್ವನಾಥ್
ಎಡಿಜೆ ಅವರು ತಮ್ಮ ಕೆಲವು ತೀರ್ಪುಗಳಲ್ಲಿ ಎಸ್ಪಿ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೇ ಆರೋಪಿತ ಪೊಲೀಸರು ಕೆಲವು ಪ್ರಕರಣಗಳಿಗಾಗಿ ನ್ಯಾಯಾಲಯದಲ್ಲಿ ಹಾಜರಿರಬೇಕಿತ್ತು. ಇದರಿಂದ ಬೇಸತ್ತಿದ್ದರು. ಹೀಗಾಗಿ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೀರ್ ದಾಸ್ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ
ಎಡಿಜೆ ಮೇಲಿನ ಹಲ್ಲೆಯನ್ನು ಜಂಝರ್ಪುರ್ ಬಾರ್ ಅಸೋಸಿಯೇಷನ್ ಖಂಡಿಸಿದೆ. ನ್ಯಾಯಾಂಗವನ್ನು ಹತ್ತಿಕ್ಕುವ ಹುನ್ನಾರು ಎಂದು ಗಂಭೀರ ಆರೋಪ ಮಾಡಿದೆ. ನಮಗೆ ರಕ್ಷಣೆ ಬೇಕಿದೆ ಎಂದು ಒತ್ತಾಯಿಸಿದೆ.