ಮಂಡ್ಯ: ಜಿಲ್ಲೆಯ ಮನ್ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣ ಸದ್ಯ ಸಿಐಡಿ ಅಂಗಳದಲ್ಲಿದೆ. ಸಿಐಡಿ ತನಿಖೆ ನಡುವೆಯೇ ಮನ್ಮುಲ್ ಆಡಳಿತ ಮಂಡಳಿ ಹಾಗೂ ಮಂಡ್ಯ ಪೊಲೀಸರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಹಾಲು ಹಗರಣವನ್ನ ವ್ಯವಸ್ಥಿತವಾಗಿ ಮುಚ್ಚಿ ಹಾಕುವುದರ ಜೊತೆಗೆ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ವಕೀಲ ಟಿ.ಎಸ್.ಸತ್ಯಾನಂದ ಆರೋಪಿಸಿದ್ದಾರೆ.
ಮೇ 27ರಂದು ಬೆಳಕಿಗೆ ಬಂದ ಮನ್ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಗಳು ಕೇಳಿಬಂದಿದ್ದವು. ರೈತರು, ಜಿಲ್ಲೆಯ ಮುಖಂಡರ ಒತ್ತಾಯಕ್ಕೆ ಮಣಿದಿದ್ದ ಸರ್ಕಾರ ಸದ್ಯ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಆದರೆ ಈ ನಡುವೆ ಮನ್ಮುಲ್ ಆಡಳಿತ ಮಂಡಳಿ ಹಾಗೂ ಮಂಡ್ಯ ಪೊಲೀಸರ ವಿರುದ್ಧ ಆರೋಪಗಳು ಕೇಳಿಬರ್ತಿವೆ. ಈ ಮೂಲಕ ಬಹುದೊಡ್ಡ ಹಾಲು ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಷಡ್ಯಂತ್ರಗಳು ನಡೆದಿತ್ತಾ ಎಂಬ ಅನುಮಾನಗಳು ಹುಟ್ಟಿ ಕೊಂಡಿವೆ.
ಆಡಳಿತ ಮಂಡಳಿ ಹಾಗೂ ಪೊಲೀಸರು ಎಫ್ಐಆರ್ ಹಂತದಲ್ಲೇ ಪ್ರಕರಣದ ಶಕ್ತಿ ಕುಗ್ಗಿಸಿ ಆರೋಪಿಗಳ ರಕ್ಷಣೆ ಮಾಡಲು ಬೇಕಾದ ಎಲ್ಲಾ ಕಾನೂನು ಕ್ರಮ ಅನುಸರಿದ್ದಾರೆ ಎಂದು ವಕೀಲ ಸತ್ಯಾನಂದ ಅವರು ಆರೋಪಿಸಿದ್ದಾರೆ. ಮನ್ಮುಲ್ ಆಡಳಿತ ಮಂಡಳಿ ಹಾಗೂ ಜಿಲ್ಲಾ ಪೊಲೀಸರ ವಿರುದ್ಧ ನೇರ ಆರೋಪ ಮಾಡಿರುವ ಅವರು ರಾಜಕೀಯ ಕೆಸರೆರಚಾಟದಿಂದ ನೀರು ಮಿಶ್ರಿತ ಹಾಲು ಹಗರಣ ಹಳ್ಳಹಿಡಿಯುತ್ತಿದೆ. ಸಿಐಡಿ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ ವಿಶೇಷ ತನಿಖೆ ಅಥವಾ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನ್ಮುಲ್ ಹಾಲಿಗೆ ನೀರು ಬೆರೆಸಿ ವಂಚನೆ – ತನಿಖೆ ಆರಂಭಿಸಿದ ಸಿಐಡಿ
ಇನ್ನು ಪೊಲೀಸರು ಹಾಗೂ ಆಡಳಿತ ಮಂಡಳಿ ವಂಚಕರ ನೆರವಿಗೆ ನಿಂತಿದ್ದು ಹೇಗೆ?
1. ಮೇ 27ರಂದು ಪ್ರಕರಣ ಬಯಲಾಗಿತ್ತು. ಆದರೆ ಮೇ 28ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗೆ ಜಾಮೀನು ಸಿಗುವ ಮೊಕದ್ದಮೆ ದಾಖಲಿಸಿ ಸಹಾಯ ಮಾಡಿದ್ದರು.
2. ಮನ್ಮುಲ್ನ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಮುಖ್ಯಸ್ಥರು ವಂಚನೆ, ಕಲಬೆರಕೆ, ಕಳ್ಳತನ ಸೇರಿ ಹಲವು ಅಂಶಗಳ ದೂರು ನೀಡಿದ್ದರು. ಕೇವಲ ವಂಚನೆ, ಕಲಬೆರಕೆಗೆ ಸಂಬಂಧಿಸಿದ ಪ್ರಕರಣ ಮಾತ್ರ ದಾಖಲಿಸಲಾಗಿತ್ತು
3. ಟ್ಯಾಂಕರ್ನಲ್ಲಿ ಕಂಪಾರ್ಟ್ಮೆಂಟ್ ನಿರ್ಮಿಸಿ ಹಾಲಿಗೆ ನೀರು ಬೆರಸುವ ವಂಚನೆ ನ್ಯಾಯಾಲಯದ ಗಮನಕ್ಕೆ ತರದೆ ಕೇವಲ ಕಡತದಲ್ಲಷ್ಟೆ ದಾಖಲಿಸಿ ಕೊಂಡಿದ್ದರು.
4. ಮೇ.29ರ ದೂರಿನಲ್ಲಿ ಪಿ.ರಾಜು ಜೊತೆಗೆ ಗುತ್ತಿಗೆದಾರ ರಂಜನ್ಕುಮಾರ್ ಹೆಸರಿದ್ದರು. ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದ ನ್ಯಾಯಾಲಯದ ಗಮನಕ್ಕೆ ತರದೆ ಇರುವುದು.
5. ಆರೋಪಿಗಳ ಜಾಮೀನು ಅರ್ಜಿ ಆದೇಶವಾಗುವ ಮುನ್ನ ಜೂ.10ರಂದು ಮತ್ತೆ 3 ಜಾಮೀನು ರಹಿತ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡುವ ಮೊಕದ್ದಮೆ ಸಂಖ್ಯೆಗಳನ್ನು ದಾಖಲಿಸಿ ಮದ್ದೂರು ನ್ಯಾಯಾಲಯಕ್ಕೆ ಮಾಹಿತಿ.
6. ಜೂ.11ರಂದು ಆರೋಪಿಗಳಿಗೆ ಜಾಮೀನು ಮಂಜೂರು. ಜಾಮೀನು ಪಡೆಯುವ ವೇಳೆ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಶೀತಲ ಸಮರದಿಂದ ದೂರು ದಾಖಲಾಗಿದೆ ನಾವು ಅಮಾಯಕರು ಎಂದು ಆರೋಪಿಗಳ ವಾದ ಮಂಡನೆ.
ಇಷ್ಟೆಲ್ಲವೂ ಪೊಲೀಸ್ ಇಲಾಖೆಯಲ್ಲಿ ಕಂಡುಬಂದ ಲೋಪಗಳಾದರೆ ಮನ್ಮುಲ್ ಆಡಳಿತ ಮಂಡಳಿ ವಿರುದ್ಧವೂ ಹಲವು ಆರೋಪಗಳು ಕೇಳಿಬಂದಿವೆ
1. ಒಕ್ಕೂಟದ ಅನುಮತಿ ಇಲ್ಲದ ಖಾಸಗಿ ಟ್ಯಾಂಕರ್ ಗೆ ಹಾಲು ತುಂಬಿಸಿಕೊಳ್ಳಲು ಅವಕಾಶ ನೀಡಿರುವುದು.
2. ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಆಡಳಿತ ಮಂಡಳಿ. ಕಾನೂನು ಸಲಹೆಗಾರರ ಜೊತೆ ಚರ್ಚಿಸದೆ ಸುಮ್ಮನಾಗಿದ್ದು.
3. ಸಿಬಿಐಗೆ ವಹಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದ್ದ ಆಡಳಿತ ಮಂಡಳಿ. ಬಾಯಿ ಮಾತಿಗೆ ಸಿಬಿಐಗೆ ವಹಿಸಿ ಎನ್ನುತ್ತಿರುವುದು.
ಸಿಐಡಿಗೆ ತನಿಖೆ ನಡುವೆಯೂ ಮನ್ಮುಲ್ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದು. ಎಸ್ಐಟಿ ಅಥವಾ ಸಿಬಿಐಗೆ ಪ್ರಕರಣ ವಹಿಸದಿದ್ದರೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸುವುದಾಗಿ ವಕೀಲ ಟಿ.ಎಸ್.ಸತ್ಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.