ಬೆಂಗಳೂರು: ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಮನವಿಯಂತೆ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ನನಗೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದ ಆಧಾರದ ಮೇಲೆ ತನಿಖೆ ಮಾಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಇಂದ್ರಜಿತ್ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಮನವಿ ಪತ್ರದ ಮೇಲೆ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನೂ ಹೇಳಿಲ್ಲ. ಯಾವುದೇ ಸಾಕ್ಷಿಗಳನ್ನು ಅವರು ನಮಗೆ ನೀಡಿಲ್ಲ. ಇಂದ್ರಜಿತ್ ಏನಾದರೂ ಆರೋಪ ಮಾಡೋದಾದ್ರೆ ದೂರು ಕೊಟ್ಟು ಆರೋಪಗಳನ್ನ ಮಾಡಲಿ. ನನಗೆ ಕೊಟ್ಟ ಮನವಿ ಮೇಲೆ ತನಿಖೆಗೆ ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ: ದಲಿತ ವೇಟರ್ ಮೇಲೆ ದರ್ಶನ್, ಸ್ನೇಹಿತರಿಂದ ಹಲ್ಲೆ – ಇಂದ್ರಜಿತ್ ಆರೋಪ
ಇಂದ್ರಜಿತ್ ಆರೋಪವೇನು..?
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೇಟರ್ ಕಣ್ಣುಗಳಿಗೆ ಹಾನಿಯಾಗಿದೆ. ಈ ಘಟನೆಯ ಸಂದರ್ಭದಲ್ಲಿ ದರ್ಶನ್, ರಾಕೇಶ್, ಹರ್ಷ ಮೆಲಾಂಟ, ಮತ್ತು ಪವಿತ್ರ ಗೌಡ ಇರುತ್ತಾರೆ. ಘಟನೆಯ ಬಳಿಕ 50 ಸಾವಿರ ರೂ. ನೀಡಿ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಈ ಘಟನೆ ಹೊರಗಡೆ ಬರಬಾರದು ಎಂಬ ಕಾರಣಕ್ಕೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮೈಸೂರು ಪೊಲೀಸರು ಬಳೆ ತೊಟ್ಟಿದ್ದಾರಾ ಈ ಎಲ್ಲ ಘಟನೆಗಳ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಇದೇ ವೇಳೆ ಆರೋಪಕ್ಕೆ ಮಾಧ್ಯಮಗಳು ಸಾಕ್ಷ್ಯ ನೀಡುವಂತೆ ಕೇಳಿದ್ದಕ್ಕೆ, ಈಗ ನಾನು ಬೊಮ್ಮಾಯಿ ಅವರಲ್ಲಿ ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸಲಿ. ಮುಂದೆ ನೋಡೋಣ ಎಂದು ಉತ್ತರಿಸಿದರು.