ಚಿಕ್ಕಮಗಳೂರು: 2021ರ ಜನವರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಉತ್ತಮ ಅಭ್ಯಾಸಗಳನ್ನು ಅಳವಡಿಕೆ ಮಾಡಿಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಜಿಲ್ಲೆಗೆ ಎರಡರಂತೆ ಆಯ್ಕೆ ಮಾಡಿ ಕಳುಹಿಸಲು ಸರ್ಕಾರ ಸೂಚಿಸಿತ್ತು. ಇದರಂತೆ ಇದೀಗ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಉತ್ತಮ ಅಭ್ಯಾಸಗಳನ್ನು ಅಳವಡಿಕೊಂಡಿರುವ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ತರೀಕೆರೆ ತಾಲೂಕಿನ ಸೊಕ್ಕೆ ಪ್ರೌಢ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಯಟ್ ಪ್ರಾಂಶುಪಾಲರಾದ ಪುಷ್ಪಲತಾ ಅವರು, ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಕಾರಣ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಸರ್ಕಾರ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಶಾಲೆಗಳ 5 ಅಥವಾ 6 ನಿಮಿಷದ ವೀಡಿಯೋ ಜೊತೆ ಹೆಚ್ಚಿನ ವಿಡಿಯೋಗಳನ್ನು ಕಳುಹಿಸಲು ಅವಕಾಶ ನೀಡಿತ್ತು. ಅದರಂತೆ ಜಿಲ್ಲೆಯ ಎರಡು ಶಾಲೆಗಳ ವೀಡಿಯೋಗಳನ್ನು ಕಳುಹಿಸಿಕೊಡಲಾಗಿತ್ತು. ತರೀಕೆರೆ ತಾಲೂಕಿನ ಸೊಕ್ಕೆ ಸರಕಾರಿ ಪ್ರೌಢ ಶಾಲೆ ಹಾಗೂ ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಶಾಲೆಯ ಶಿಕ್ಷಕರು ಬಹಳ ಹಿಂದಿನಿಂದಲೂ ಸಾಕಷ್ಟು ಉತ್ತಮವಾದಂತಹ ಅಭ್ಯಾಸಗಳನ್ನು ಮಕ್ಕಳಲ್ಲಿ ಮಾಡಿಸಿಕೊಂಡು ಬಂದಿದ್ದರು. ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಶಾಲೆಗಳು ಇವಾಗಿವೆ ಎಂದರು. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿ ಮಾನವೀಯತೆ ಮೆರೆದ ಶಿಕ್ಷಕ
2 ಶಾಲೆಗಳು ಸುಮಾರು ಐದರಿಂದ ಆರು ನಿಮಿಷದ ವೀಡಿಯೋಗಳನ್ನು ನಮಗೆ ಕಳುಹಿಸಿಕೊಟ್ಟಿತ್ತು. ನಾವು ಆ ವಿಡಿಯೋಗಳನ್ನು ಧಾರವಾಡಕ್ಕೆ ಕಳುಹಿಸಿದ್ದೆವು. ಈಗ ರಾಜ್ಯದ ಶಾಲೆಗಳಲ್ಲಿ ಉತ್ತಮ ಅಭ್ಯಾಸಗಳನ್ನ ಮಾಡಿಕೊಂಡಿರುವ ಶಾಲೆಗಳ ಪಟ್ಟಿಯಲ್ಲಿ ನಮ್ಮ ಜಿಲ್ಲೆಯ ಎರಡು ಶಾಲೆಗಳು ಸೇರಿರುವುದು ಸಂತಸದ ವಿಷಯ. ಬೇರೆ ಜಿಲ್ಲೆಗಳಲ್ಲಿ ಒಂದೊಂದು ಶಾಲೆ ಸೇರಿಕೊಂಡಿದ್ದರೆ ನಮ್ಮ ಜಿಲ್ಲೆಯಲ್ಲಿ ಎರಡೂ ಶಾಲೆಗಳು ಸೇರಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಈ ರೀತಿ ಉತ್ತಮವಾದ ಅಭ್ಯಾಸಗಳಿಂದ ಆಯ್ಕೆಯಾದ ಶಾಲೆಗಳಿಗೆ ಸರ್ಕಾರದಿಂದ 5000 ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಈಗ ಆಯ್ಕೆಯಾಗಿರುವ ಶಾಲೆಗಳನ್ನು ರಾಜ್ಯ ಮಟ್ಟದಲ್ಲಿ ಆಯ್ಕೆ ಮಾಡಿರುವುದರಿಂದ ಮತ್ತೊಮ್ಮೆ ವಿಡಿಯೋಗಳನ್ನು ಮಾಡಿಕೊಡುವಂತೆ ಸೂಚನೆ ಬಂದಿದೆ. ಮುಂದಿನ ಹದಿನೈದು ದಿನಗಳ ಕಾಲಾವಕಾಶ ಇದೆ. ಆ ದಿನಗಳಲ್ಲಿ ನಾವು ಶಾಲೆಯ ಮತ್ತೊಂದು ವೀಡಿಯೋವನ್ನು ಮಾಡಿ ಕಳುಹಿಸಿಕೊಡಬೇಕಾಗಿದೆ. ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಊರಿನ ಸಾರ್ವಜನಿಕರ ಸಹಕಾರ ಪಡೆದು ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಂತೆ ವೀಡಿಯೋ ಚಿತ್ರೀಕರಣಕ್ಕೆ ತಿಳಿಸಿದ್ದೇವೆ ಅದನ್ನು ಮುಂದೆ ರಾಷ್ಟ್ರ ಮಟ್ಟದ ಆಯ್ಕೆಗಾಗಿ ಕಳುಹಿಸಿಕೊಡುತ್ತೇವೆ. ಈ ಶಾಲೆಗಳು ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ.