ಕಳೆದ 71 ದಿನಗಳ ಕಾಲ ದೊಡ್ಮನೆಯಲ್ಲಿ ಟಾಸ್ಕ್, ಮನರಂಜನೆ, ಹರಟೆಯಲ್ಲಿ ತೊಡಗಿದ್ದ ಸ್ಪರ್ಧಿಗಳು ಕರ್ನಾಟಕದಲ್ಲಿ ಲಾಕ್ಡೌನ್ ಘೋಷಣೆಯಾಗಿರುವ ಸುದ್ದಿಯನ್ನು ಕೇಳಿ ಶಾಕ್ ಆಗಿದ್ದಾರೆ.
ಹೋಟೆಲಿನಲ್ಲಿ ಕ್ವಾರಂಟೈನ್ ಬಳಿಕ ಮನೆ ಪ್ರವೇಶಿಸಿದ್ದ ಸ್ಪರ್ಧಿಗಳಿಗೆ ಹೊರ ಜಗತ್ತಿನ ಸಂಪರ್ಕ ಕಡಿತವಾಗಿತ್ತು. ಮೊಬೈಲ್, ಸಾಮಾಜಿಕ ಜಾಲತಾಣದಿಂದ ಹೊರಗಡೆ ಇದ್ದ ಇವರಿಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಇವರ ಜೊತೆ ನೇರವಾಗಿ ಸುದೀಪ್ ಬಿಟ್ಟರೆ ಬೇರೆಯವರ ಸಂಪರ್ಕ ಇರುತ್ತಿರಲಿಲ್ಲ.
ಬಿಗ್ ಬಾಸ್ ಮನೆಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಸ್ಪರ್ಧಿಗಳಿಗೆ 71ನೇ ದಿನ ಬ್ರೇಕಿಂಗ್ ನ್ಯೂಸ್ ತೋರಿಸಲಾಗುತ್ತದೆ. ಈ ವೇಳೆ ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಕೊರೊನಾ ಸೋಂಕು ಸುದ್ದಿಯನ್ನು ಆರಂಭದಲ್ಲಿ ಪ್ರಸಾರ ಮಾಡಲಾಗುತ್ತದೆ. ಬಳಿಕ ಸಿಎಂ ಯಡಿಯೂರಪ್ಪನವರು ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದ ತುಣುಕನ್ನು ತೋರಿಸಲಾಗುತ್ತದೆ.
ಇಲ್ಲಿಯವರೆಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದ ಸ್ಪರ್ಧಿಗಳು ಲಾಕ್ಡೌನ್ ಘೋಷಣೆಯ ಸುದ್ದಿಯನ್ನು ಕೇಳುತ್ತಿದ್ದಂತೆ ಶಾಕ್ಗೆ ಒಳಗಾಗುತ್ತಾರೆ. ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅಳತೊಡಗುತ್ತಾರೆ. ಇನ್ನು ಮೂರು ವಾರಗಳ ಕಾಲ ಮನೆಯಲ್ಲಿರಬಹುದು ಎಂಬ ಕನಸು ಛಿದ್ರಗೊಳ್ಳುತ್ತದೆ.ಪ್ರಶಾಂತ್ ಸಂಬರಗಿ ಎರಡು ಕೈಯನ್ನು ತಲೆ ಮೇಲೆ ಹಾಕಿ ಕಣ್ಣೀರು ಹಾಕುತ್ತಾರೆ.
ಲಾಕ್ಡೌನ್ ಘೋಷಣೆಯಾಗಿದ್ದು ಚಿತ್ರೀಕರಣಕ್ಕೆ ಅನುಮತಿ ನೀಡದ ಕಾರಣ ಬಿಗ್ ಬಾಸ್ 8ನೇ ಅವೃತ್ತಿಯನ್ನು ವಾಹಿನಿ ನಿಲ್ಲಿಸಿದೆ. ಈ ಸಂಬಂಧ ಮೇ 8ರಂದು ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪೋಸ್ಟ್ ಮಾಡಿ ನಿಲ್ಲಿಸುವ ವಿಚಾರವನ್ನು ತಿಳಿಸಿದ್ದರು. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ ಎಂದು ಹೇಳಿದ್ದರು.