ಲಕ್ನೋ: ಭಾರತಾದ್ಯಂತ ಕೊರೊನಾ ಎರಡನೇ ಅಲೆ ಅಪ್ಪಳಿಸಿದೆ. ವೈರಸ್ನನ್ನು ತಡೆಗಟ್ಟಲು ಜನರಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹಲವಾರು ಸಲಹೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎಂಬುವುದರ ಬಗ್ಗೆ ಜನರಿಗೆ ತಿಳಿ ಹೇಳಲು ಉತ್ತರ ಪ್ರದೇಶದ ಅರ್ಚಕರೊಬ್ಬರು ದೇವಾಲಯದಲ್ಲಿರುವ ದುರ್ಗ ದೇವಿ ದೇವರ ವಿಗ್ರಹಕ್ಕೆ ಮಾಸ್ಕ್ ಹಾಕಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ಚೈತ್ರ ನವರಾತ್ರಿಯ ಎರಡನೇ ದಿನವಾದ ಬುಧವಾರದಂದು, ಭಕ್ತಾದಿಗಳು ದೇವಾಲಯಕ್ಕೆ ಬಂದಾಗ ದುರ್ಗ ದೇವಿ ಮಾಸ್ಕ್ ಧರಿಸಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲದೇ ಅರ್ಚಕರು ಭಕ್ತರಿಗೆ ಪ್ರಸಾದವಾಗಿ ಮಾಸ್ಕ್ನನ್ನು ವಿತರಿಸಿದ್ದು ವಿಶೇಷವಾಗಿತ್ತು.
ಈ ಕುರಿತಂತೆ ಪ್ರತಿಕ್ರಿಯಿಸಿದ ದೇವಾಲಯದ ಅರ್ಚಕ ಮನೋಜ್ ಶರ್ಮ, ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ, ಅವರಿಗೆ ಒಂದು ಬಲವಾದ ಸಂದೇಶವನ್ನು ಸಾರುವ ಸಲುವಾಗಿ ದೇವಿಯ ವಿಗ್ರಹಕ್ಕೆ ಮಾಸ್ಕ್ ತೊಡಿಸಬೇಕೆಂದು ನಿರ್ಧರಿಸಿದೆ. ಭಕ್ತರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ನಾವು ಮಾಸ್ಕ್ಗಳನ್ನು ಪ್ರಸಾದಂತೆ ವಿತರಿಸುತ್ತಿದ್ದೇವೆ ಎಂದರು.
ದೇವಾಲಯಕ್ಕೆ ಬರುವ ಭಕ್ತರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿದ್ದೇವೆ. ದೇವಾಲಯದ ಆವರಣದಲ್ಲಿ ಕೋವಿಡ್ ಕುರಿತಂತೆ ಹಲವರು ಸಲಹಾ ಪಟ್ಟಿಯನ್ನು ಅಳವಡಿಸಿದ್ದೇವೆ. ಬೆಳಗ್ಗೆ ಹಾಗೂ ಸಂಜೆ ಮಾತ್ರ ದೇವಿಗೆ ಆರತಿ ಮಾಡಲಾಗುತ್ತದೆ. ಒಂದು ಬಾರಿಗೆ ದೇವಾಲಯದ ಒಳಗೆ 5 ಮಂದಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.