– ಸ್ವಾತಂತ್ರ್ಯ ಸಂಗ್ರಾಮದ ಪಾಠ ಹೇಳಿದ ಸಿದ್ದರಾಮಯ್ಯ
ದಾವಣಗೆರೆ: ನಮ್ಮ ದೇಶದಲ್ಲಿ ಬ್ರಿಟಿಷರ ವಿರುದ್ಧ ಮೊದಲು ಸ್ವಾತಂತ್ರ್ಯ ಸಂಗ್ರಾಮ ನಡೆಸಿದ್ದು ಟಿಪ್ಪು ಸುಲ್ತಾನ್, ರಾಣಿ ಚನ್ನಮ್ಮನ ಹಾಗೂ ಸಂಗೊಳ್ಳಿ ರಾಯಣ್ಣನ ಕಾಲದಲ್ಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಣ್ಣ ಸೋತಿದ್ದು, ನಮ್ಮಲ್ಲಿರುವ ಕೆಲ ದೇಶ ದ್ರೋಹಿಗಳಿಂದ. ರಾಯಣ್ಣ ಸಣ್ಣ ಸೈನ್ಯವನ್ನು ಕಟ್ಟಿ ಗೆರಿಲ್ಲಾ ಯುದ್ಧ ಮಾಡಿದ್ದರು. ಗೆರಿಲ್ಲಾ ಯುದ್ಧ ಅಂದ್ರೆ ನಿಮಗೆ ಗೊತ್ತಾ ಎಂದು ಜನರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು.
ಯಕ್ಕನಹಳ್ಳಿಯನ್ನು ಮಿನಿ ನಂದಗಡ ಎಂದು ಕರೆಯುತ್ತಾರೆ ಅದು ತಪ್ಪು, ನಂದಗಡ ಸಂಗೊಳ್ಳಿ ರಾಯಣ್ಣನನ್ನು ನೇಣು ಹಾಕಿದ ಸ್ಥಳ. ಹುಟ್ಟಿದ ಜಾಗ ಸಂಗೊಳ್ಳಿ ಗ್ರಾಮ. ಮಿನಿ ನಂದಗಡ ಅಂದರೆ ರಾಯಣ್ಣನನ್ನು ನೇಣು ಹಾಕಿದ ಜಾಗಾನಾ ಇದು ಎಂದು ಪ್ರಶ್ನಿಸುವ ಮೂಲಕ ಗ್ರಾಮಸ್ಥರಿಗೆ ವಿಸ್ತಾರವಾಗಿ ವಿವರಿಸಿದರು. ಸಂಗೊಳ್ಳಿ ಹಾಗೂ ನಂದಗಡ ಅಭಿವೃದ್ಧಿಗೆ 270 ಕೋಟಿ ರೂ. ಬಿಡುಗಡೆ ಮಾಡಿದ್ದೆ. ಈಗ ಏನಾದರೂ ಅನುದಾನ ಕೊಡುತ್ತಿದ್ದಾರೇನಯ್ಯ ರೇವಣ್ಣ ಎಂದು ಪ್ರಶ್ನಿಸಿದರು.
ರೇಣುಕಾಚಾರ್ಯ ನೀನು ಯಡಿಯೂರಪ್ಪನ ಜೊತೆ ಚೆನ್ನಾಗಿದ್ದೀಯಾ, ನೀನು ಹೇಳಿ ಬೇಗ ಅನುದಾನ ಕೊಡಿಸು. ರಾಯಣ್ಣ ಬಿಡಿ, ಚನ್ನಮ್ಮನ ಹೆಸರಿನಲ್ಲಾದರೂ ಅನುದಾನ ಬಿಡುಗಡೆ ಮಾಡಿ ಎಂದು ಶಾಸಕ ರೇಣುಕಾಚಾರ್ಯಗೆ ಕುಟುಕಿದರು.