ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ: ನಿವೃತ್ತ ಪೊಲೀಸ್ ಅಧೀಕ್ಷಕ ಬಡಿಗೇರ

Public TV
2 Min Read
FotoJet 10 1

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುವ ಅವಕಾಶ ಎಲ್ಲರಿಗೂ ಲಭ್ಯವಾಗುವುದಿಲ್ಲ. ಸಮಾಜದಲ್ಲಿ ಹಿಂದೇ ಉಳಿದವರು, ಮಹಿಳೆಯರು ಅಶಕ್ತರು ಪೊಲೀಸರಲ್ಲಿ ನೆರವು ಕೋರಿ ಆಗಮಿಸುತ್ತಾರೆ. ಇವರ ಅಳುಲುಗಳನ್ನು ಆಲಿಸಿ, ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ, ಕಾನೂನು ಚೌಕಟ್ಟನ್ನು ಮೀರಬೇಡಿ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎ.ಆರ್.ಬಡಿಗೇರ ಹೇಳಿದ್ದಾರೆ.

FotoJet 11 2

ಹುಬ್ಬಳ್ಳಿ ಗೋಕುಲದ ಹೊಸ ಸಿ.ಆರ್. ಮೈದಾನದಲ್ಲಿ ಆಯೋಜಿಸಲಾಗಿದ್ದ 2021 ನೇ ಸಾಲಿನ ಪೊಲೀಸ್ ಧ್ವಜದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, 1992 ರಿಂದ 2000 ವರೆಗೆ ಹುಬ್ಬಳ್ಳಿ ಅತಿ ಸೂಕ್ಷ್ಮ ಪ್ರದೇಶವಾಗಿತ್ತು. ಕೋಮು ಘರ್ಷಣೆಗಳಾಗುತ್ತಿದ್ದ ನಗರದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲಾಗಿದೆ. ಈಗ ಹುಬ್ಬಳ್ಳಿಯಲ್ಲಿ ಶಾಂತ ಪರಿಸ್ಥಿತಿ ಇದೆ. ಅವಳಿ ನಗರದ ಪೊಲೀಸರ ಶ್ರಮ ಇದಕ್ಕೆ ಕಾರಣವಾಗಿದೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಶಿಸ್ತು ಅವಶ್ಯಕವಾಗಿದೆ. ಪೊಲೀಸರು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಬಡವರ ಸಮಸ್ಯೆಗಳನ್ನು ಕಳಕಳಿಯಿಂದ ಬಗೆಹರಿಸಿ ಕಾನೂನು ನೆರವು ನೀಡಿದರೆ, ಜೀವನ ಪೂರ್ತಿ ನಿಮಗೆ ಅಭಾರಿಯಾಗಿರುತ್ತಾರೆ. ಇಲಾಖೆಯಲ್ಲಿ ಸುಧಾರಣೆಯಾಗಿದ್ದು, ಉತ್ತಮ ವಾಹನ, ಕಟ್ಟಡ, ಕಂಪ್ಯೂಟರ್ ಸೌಲಭ್ಯಗಳಿವೆ. ವೈದ್ಯರ ಹಾಗೆ ಪೊಲೀಸರು ಸಮಾಜವನ್ನು ಚಿಕಿತ್ಸೆ ದೃಷ್ಟಿಯಿಂದ ನೋಡಿ ಸರಿಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು ಪೊಲೀಸ್ ವೃತ್ತಿ ಆಗಮಿಸುತ್ತಿದ್ದೀರಿ. ನಿಮಗೆಲ್ಲ ಒಳ್ಳೆಯದಾಗಲಿ ಎಂದರು.

FotoJet 7 1

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಆಯುಕ್ತ ಲಾಭುರಾಮ್, ಏಪ್ರಿಲ್ 2 ಮಹತ್ವದ ದಿನವಾಗಿದೆ. 1965 ರಲ್ಲಿ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಯ ಮೂಲಕ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯನ್ನು ಪುನ್ರರಚಿಸಿ ಅಸ್ತಿತ್ವಕ್ಕೆ ತರಲಾಯಿತು. ಇದರ ನೆನಪಿಗಾಗಿ ಧ್ವಜ ದಿನಾಚರಣೆಯಲ್ಲಿ ಆಚರಿಸಲಾಗುತ್ತದೆ. ಪೊಲೀಸ್ ಧ್ವಜ ಮಾರಾಟದಿಂದ ಬರುವ ಹಣವನ್ನು ನಿವೃತ್ತ ಸಿಬ್ಬಂದಿಗಳ ಕಲ್ಯಾಣ ನಿಧಿಗೆ ಬಳಕೆ ಮಾಡಿಕೊಳ್ಳಲಾಗುವುದು. ನಿವೃತ್ತಿ ಸಿಬ್ಬಂದಿಯ ವೈದ್ಯಕೀಯ ವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡಲಾಗುವುದು. ಧ್ವಜ ಮಾರಾಟದ ಹಣದಲ್ಲಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ ಶೇ.50, ಕಾರ್ಯ ನಿರತ ಪೊಲೀಸರ ನಿಧಿಗೆ ಶೇ.25 ಹಾಗೂ ಕೇಂದ್ರ ಪೊಲೀಸ್ ನಿಧಿಗೆ ಶೇ.25 ರಷ್ಟು ಹಣ ಸಲ್ಲಿಕೆಯಾಗುತ್ತದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಿವಪ್ಪ ಕಮಟಗಿ, ಕುಶಲ್ ಪಂಡ್ರೆ ಅವರಿಗೆ ಮುಖ್ಯ ಮಂತ್ರಿಗಳ ಪದಕ ದೊರತಿರುವುದು ಸಂತಸವಾಗಿದೆ ಎಂದು ನುಡಿದರು.

FotoJet 9 1

ಈ ಸಂದರ್ಭದಲ್ಲಿ 2021 ಸಾಲಿನ ಧ್ವಜ ಬಿಡುಗಡೆ ಮಾಡಲಾಯಿತು. ಸ್ಥಳದಲ್ಲಿ ಸಾಂಕೇತಿಕವಾಗಿ ಧ್ವಜ ಮಾರಾಟ ಮಾಡಿ ಪೊಲೀಸ್ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಲಾಯಿತು. ಮಾರ್ಚ್ ತಿಂಗಳಲ್ಲಿ ನಿವೃತ್ತರಾದ ಸಹಾಯಕ ಆರಕ್ಷಕ ನಾಗರಾಜ್ ಪಾಟೀಲ, ಪೊಲೀಸ್ ದಲಾಯತ್ ಶಕುಂತಲ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

FotoJet 8 1

ಸಿ.ಎ.ಆರ್ ತುಕಡಿ, ಉತ್ತರ, ದಕ್ಷಿಣ, ಧಾರವಾಡ, ಮಹಿಳಾ, ಸಂಚಾರ ಉಪವಿಭಾಗದ ಪೊಲೀಸ್ ಸಿಬ್ಬಂದಿಯಿಂದ ಪಥ ಸಂಚಲನ ಜರುಗಿತು. ಸಶಸ್ತೃ ಮೀಸಲು ಪಡೆ ಆರಕ್ಷಕ ಮಹದೇವ ಅಥಣಿ ನೇತೃತ್ವದಲ್ಲಿ ರಾಷ್ಟಧ್ವಜ ಹಾಗೂ ಪೊಲೀಸ್ ಧ್ವಜಗಳ ಆಗಮನ ಹಾಗೂ ನಿರ್ಗಮನವಾಯಿತು. ಆರ್.ಎಸ್.ಐ ಸಂತೋಷ್ ಬೋಜಪ್ಪಗೋಳ್ ಪಥ ಸಂಚಲದ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದರು. ಡಿಸೋಜಾ ತಂಡದಿಂದ ಪೊಲೀಸ್ ಬ್ಯಾಂಡ್ ನುಡಿಸಲಾಯಿತು.

FotoJet 5 1

ನಿವೃತ್ತ ಪೊಲೀಸ್ ಅಧೀಕ್ಷಕರಾದ ಎಸ್.ಎಂ.ಸಂದಿಗಾವಡ, ರವಿ ಹೆಚ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪ ಪೊಲೀಸ್ ಆಯುಕ್ತ ರಾಮರಾಜನ್, ಆರ್.ಬಿ.ಬಸರಗಿ, ಸಶಸ್ತ್ರ ಮೀಸಲ ಪಡೆ ಉಪ ಪೊಲೀಸ್ ಆಯುಕ್ತ .ಎಸ್.ವಿ.ಯಾದವ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *